ಸಿ.ಪಿ.ನಾಗರಾಜ ಬರೆದ ಮೂರು ಮಾಡರ್ನ್ ಕಥಾಪ್ರಸಂಗಗಳು  |
| ಸಿ.ಪಿ.ನಾಗರಾಜ |
| ಮಂಗಳವಾರ, 13 ಆಗಸ್ಟ್ 2013 (08:21 IST) |
ಕಳೆದ ಹಲವಾರು ವರುಶಗಳಲ್ಲಿ ನಡೆದ ಮೂರು ಪ್ರಸಂಗಗಳನ್ನು ಇಲ್ಲಿ ಹೇಳುತ್ತಿದ್ದೇನೆ .
ಪ್ರಸಂಗ-೧
ಒಂದು ದಿನ ಬೆಳ್ಳಂಬೆಳಗ್ಗೆ ಕಾಳಮುದ್ದನ ದೊಡ್ಡಿಯಿಂದ ಮಂಡ್ಯಕ್ಕೆ ಹೋಗಲೆಂದು ಬಸ್ಸುಗಳು ನಿಲ್ಲುವ ಜಾಗದ ರಸ್ತೆ ಬದಿಗೆ ಬಂದು ನಿಂತೆನು . ದೊಡ್ಡದಾಗಿದ್ದ ಆ ಜಾಗದಲ್ಲಿ ನಾಲ್ಕೈದು ಗೂಡೆಗಳನ್ನು ಇಟ್ಟುಕೊಂಡು ಒಬ್ಬ ರೈತ ಕುಳಿತಿದ್ದ . ಅವನ ಬಳಿಗೆ ಬಂದ ವ್ಯಾಪಾರಿಯೊಬ್ಬ ಅವನನ್ನು ಕುರಿತು - " ಯಾವೂರಯ್ಯ ? " ಎಂದ . " ಕಳ್ಳಿಮೆಳೆದೊಡ್ಡಿ ಕಣ್ ಬಾಪ್ಪ . " " ಟೆಂಬಟೆ ಇಲ್ಲೇ ಮಾರ್ತಿಯೋ ....... ಇಲ್ಲ ಮಂಡ್ಯದ ಮಾರ್ಕೆಟ್ಟಿಗೋ ? " " ಸರಿಯಾದ ರೇಟ್ ಬಂದ್ರೆ ಇಲ್ಲೇ ಕೊಡ್ತೀನಿ ....... ಇಲ್ದೇದ್ರೆ ಮಂಡ್ಯಕ್ಕೆ ಹೊಯ್ತಿನಿ . " " ಹಂಗಾದ್ರೆ ಅದೇನ್ ಒಂದ್ ರೇಟ್ ಹೇಳು ಮಂತೆ ." ರೈತನು ತಾನು ಬೆಳೆದ ಟೊಮೊಟೊ ಹಣ್ಣನ್ನು ಮಾರಲೆಂದು ಹಳ್ಳಿಯಿಂದ ಬಂದಿದ್ದ . ಈಗ ತನ್ನ ಗೂಡೆಗಳ ಕಡೆಗೆ ಮತ್ತೊಮ್ಮೆ ನೋಡಿ- " ಹಣ್ಣು ತುಂಬಾ ಚೆಂದಾಗವೆ . ಒಂದ್ಸತಿ ನೀನು ನೋಡು . ಆಮ್ಯಾಲೆ ರೇಟ್ ಹೇಳ್ತಿನಿ ." " ನೋಡೋದೇನ ..... ಮ್ಯಾಲೆಯೇ ಕಾಣ್ತಾವಲ್ಲ . ಹೇಳು ಒಂದು ರೇಟ್ನ " " ನಿಂಗೆ ಎಷ್ಟು ಗೂಡೆ ಬೇಕು ." " ಎಲ್ಲಾನು ಸೇರ್ಸೆ ರೇಟ್ ಹೇಳಯ್ಯ ."
ಈಗ ರೈತ ಒಂದೆರಡು ಗಳಿಗೆ ಮನದಲ್ಲಿಯೇ ಅಳೆದು ತೂಗಿ ಒಂದು ಮೊತ್ತವನ್ನು ಹೇಳಿದ . ಇದನ್ನು ಕೇಳುತ್ತಿದ್ದಂತೆಯೇ ವ್ಯಾಪಾರಿಯು - " ಓಹೊಹೋ...... ಏನು ತೆಂಗಿನ ಮರದ ಮ್ಯಾಲೆ ಕುಂತಿದ್ದಿಯೇ ? " " ನಾನೆಲ್ಲಾದ್ರೂ ಕುಂತಿರ್ಲಿ..... ನೀನೊಂದು ರೇಟ್ ಕೇಳೋ ಮಾರಾಯ ." " ಏ....ನಿನ್ ಜೊತೇಲಿ ಯಾಪಾರ ಮಾಡೋಕಾಗೋದಿಲ್ಲ ಬುಡಪ್ಪ . ರೇಟ್ ಹೇಳಿ ಏನು ಪ್ರಯೋಜನ ?" " ಇಲ್ಲ ಕಣ್ ಕೇಳಯ್ಯ . ಕೇಳೂಕೇನ್ ಕಷ್ಟ . ನಾನೇನು ನೀ ಕೇಳ್ದಷ್ಟಕ್ಕೆ ಕೊಟ್ಬುಟ್ಟನೆ ? " ಈಗ ವ್ಯಾಪಾರಿಯು ಹಣ್ಣಿನ ಗೂಡೆಗಳ ಹತ್ತಿರ ಬಂದು , ಒಂದೆರಡು ಹಣ್ಣನ್ನು ಮತ್ತೊಮ್ಮೆ ನೋಡಿ , ಒಂದು ಮೊತ್ತವನ್ನು ಹೇಳಿದ . ಕೂಡಲೇ ರೈತ - " ನೀನು ಐನಾತಿ ಕುಳವೇ ಬುಡು . " " ಯಾಕಯ್ಯ ? " " ಇನ್ನೇನ್ ಮಂತೆ , ನೀನು ತೆಂಗಿನ ಬುಡುತ್ತಾವು ಕುಳೀತಿದ್ದೀಯಲ್ಲ ! "
ಈಗ ಅವರಿಬ್ಬರ ಚೌಕಾಸಿ ವ್ಯಾಪಾರಕ್ಕೆ ತೆಂಗಿನ ಮರದ ಬುಡ ಮತ್ತು ತುದಿಗಳು ಎರಡು ನೆಲೆಗಳಾಗಿದ್ದವು . ವ್ಯಾಪಾರದ ಮಾತು ಮುಂದುವರಿದಂತೆಲ್ಲಾ ನಡುನಡುವೆ , ಅವರಿಬ್ಬರೂ ಒಂದೊಂದು ಮೊತ್ತವನ್ನು ಹೇಳುತ್ತಿದ್ದರು . ಮೊತ್ತವನ್ನು ಸೂಚಿಸುತ್ತಿದ್ದಂತೆಯೇ - " ನೀನೊಸಿ ಮ್ಯಾಕ್ ಬಾ " " ನೀನೊಸಿ ಇಳಿದು ಬಾ ಕೆಳಕ್ಕೆ " - ಎಂಬ ಮಾತುಗಳು ತೂರಿಬರುತ್ತಿದ್ದವು . ಕಟ್ಟಕಡೆಗೆ ರೈತನು -
" ಇನ್ನೆಷ್ಟು ಅಂತ ಇಳಿಯನಯ್ಯ ? ಇನ್ನೂ ಕಮ್ಮಿಯಾಗಿ ಕೊಟ್ರೆ ಏನ್ ತಾನೇ ಸಿಕ್ಕದು ನಂಗೆ ? ನಮ್ಮ ರೈತರ ನೋವು ನಿಂಗೆ ಹೆಂಗಪ್ಪ ಗೊತ್ತಾದದು ? ಈ ಬ್ಯಾಸ್ಗೇಲಿ ಟೆಂಬಟೆ ಬೆಳೀಬೇಕಾದ್ರೆ ಎಷ್ಟು ಕಷ್ಟ ಗೊತ್ತೆ ? ಹಾಳಾದ್ ಕರೆಂಟ್ ಬ್ಯಾರೆ ಸರಿಯಾದ ಟೇಮಲ್ಲಿ ಕೈಕೊಡ್ತದೆ......ಬರಬಾರದ್ದು ರೋಗ ಹಣ್ಣಿಗೆ ಬತ್ತದೆ . ಅಂತಾದ್ದರಲ್ಲಿ ಇಷ್ಟು ಕಮ್ಮಿಯಾಗಿ ಕೇಳ್ತಾಯಿದ್ದೀಯಲ್ಲ ನ್ಯಾಯವೇನಯ್ಯ ? "
" ನಾನೇನು ನಿನ್ನ ಹಣ್ ತಕೊಂಡು ಕುಬೇರ ಆಗ್ಬುಟ್ಟನೆ ! ನಾನು ತಳ್ಳುಗಾಡಿ ಮ್ಯಾಲೆ ತರಕಾರಿ ಇಟ್ಕೊಂಡು ಬಿಸ್ಲು ಮಳೆ ಅನ್ನದೇ ಸಂಜೆ ತಂಕ ಊರೆಲ್ಲಾ ತಿರುಗುದ್ರೆ ತಾನೇ..... ನಂಗೂ ಜೀವನ ಮಾಡೋಕೆ ಮೂರ್ಕಾಸು ಸಿಗೂದು . " " ಓ , ಏನೋ ಒಬ್ಬೊಬ್ಬರದೂ ಒಂದೊಂದು ಹೊಡ್ಬಾಳು ಬುಡಪ್ಪ " ಎಂದು ನಿಟ್ಟುಸಿರು ಬಿಡುತ್ತ , ರೈತನು ಈಗ ಒಂದು ಮೊತ್ತವನ್ನು ಹೇಳಿದ . ಮತ್ತೆ ಒಂದೆರಡು ಬಾರಿ ಚೌಕಾಸಿ ನಡೆದು , ವ್ಯಾಪಾರಿಯು ರೈತನಿಂದ ಹಣ್ಣನ್ನು ಕೊಂಡುಕೊಂಡನು .
ಪ್ರಸಂಗ-೨
ಒಂದು ದಿನ ಸಂಜೆ ವೇಳೆ ನನ್ನ ಹೆಂಡತಿ ಮತ್ತು ಮಗನೊಡನೆ ಕಾಳಮುದ್ದನದೊಡ್ಡಿಯ ಪೇಟೆ ಬೀದಿಗೆ ಹೋದೆನು . ಬೀದಿ ಬದಿಯಲ್ಲಿ ಅನೇಕ ಹೆಂಗಸರು ಹಣ್ಣು-ತರಕಾರಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರು . ಅಲ್ಲಿ ಒಂದೆಡೆಯಲ್ಲಿ ನಿಂತುಕೊಂಡು ನನ್ನ ಹೆಂಡತಿ ಒಂದು ಪರಂಗಿ ಹಣ್ಣನ್ನು ತೋರಿಸುತ್ತಾ , ಅದರ ರೇಟನ್ನು ಕೇಳಿದಳು . " ಎರಡು ರೂಪಾಯಿ ಆಯ್ತದೆ ಕಣವ್ವ . " " ಏನಮ್ಮ , ಇಷ್ಟು ಸಣ್ಣದ್ದಕ್ಕೆ ಎರಡು ರೂಪಾಯೇ ? " " ನಿಮಗೆ ನಾನು ಹೇಳಿರೂದು ಕಮ್ಮಿ ರೇಟು . ಇಂತದ ಬ್ಯಾರೆ ಕಡೆ ನಾಲ್ಕು ರೂಪಾಯಿಲ್ದೇ ಕೊಡೂದಿಲ್ಲ . " ನನ್ನ ಹೆಂಡತಿ ಮತ್ತು ತರಕಾರಿ ಅಮ್ಮನ ನಡುವೆ ಚೌಕಾಸಿ ವ್ಯಾಪಾರ ಮುಂದುವರಿಯುತ್ತಿದ್ದಾಗ ,ಐದು ವರುಷದ ನನ್ನ ಮಗ ಅಲ್ಲಿ ಜೋಡಿಸಿಟ್ಟಿದ್ದ ಒಂದೆರಡು ಹಣ್ಣುಗಳನ್ನು ಕೈಯಿಂದ ಮುಟ್ಟಿ ಅಲ್ಲಾಡಿಸಿದ . ಇದನ್ನು ಕಂಡ ತರಕಾರಿ ಅಮ್ಮನು -
" ಹಂಗೆಲ್ಲಾ ಹಿಸುಕಬ್ಯಾಡ....ಹಣ್ಣು ಹಾಳಾಗೊಯ್ತವೆ " ಎಂದು ಗದರಿಸಿದಳು . ನನ್ನ ಹೆಂಡತಿಯು ಮಗನನ್ನು ಹಿಂದಕ್ಕೆ ಎಳೆದುಕೊಳ್ಳುತ್ತಾ- " ಏ.... ಹಂಗೆಲ್ಲಾ ಮುಟ್ಟಬಾರದು . ಇತ್ತಗೆ ಹಿಂದಕ್ಕೆ ಬಾರೋ ಚಿನ್ನ " ಎಂದಳು . ಕೂಡಲೇ ತರಕಾರಿ ಅಮ್ಮನು -
" ಗಂಡಹೆಂಡ್ತಿ ಇಬ್ಬರೂ ಕೈತುಂಬಾ ಸಂಬಳ ಎಣಿಸ್ಕೊತೀರಿ . ಮಕ್ಕಳಿಗೆ ಚಿನ್ನ ಅಂತ್ಲು ಹೆಸರಿಡ್ತೀರಿ.... ಬೆಳ್ಳಿ ಅಂತಾನು ಕರಿತೀರಿ ! " ಎಂದು ಉದ್ಗಾರವೆಳೆದಳು . ಆಗ ನಾನು ನಗುತ್ತಾ- " ಇಬ್ಬರೂ ಕೆಲಸದಲ್ಲಿ ಇಲ್ಲ ಕಣಮ್ಮ . ನನಗೊಬ್ಬನಿಗೆ ಸಂಬಳ ಬರೋದು . ನಮ್ಮ ಮಗನ ಹೆಸರು ’ ಚಿನ್ಮಯ ’ ಅಂತ ಕಣಮ್ಮ . ಚಿಕ್ಕದಾಗಿ ’ ಚಿನ್ನ ’ ಎಂತ ಕರೀತಿವಿ . ನಮ್ಮ ಹತ್ತಿರ ನೀವು ಹೇಳೂವಂಗೆ ಯಾವ ಸಂಪತ್ತು ಇಲ್ಲ ಕಣಮ್ಮ . " ಈಗ ನನ್ನ ಹೆಂಡತಿ ಮತ್ತೆ ಕೇಳಿದಳು- " ಎಷ್ಟಕ್ಕೆ ಕೊಡ್ತಿಯೇ ಹೇಳಮ್ಮ ."
" ಎಂಟಾಣೆ ಕಮ್ಮಿ ಕೊಡವ್ವ . ಅದಕ್ಕಿಂತ ಕಮ್ಮಿಗೆ ಕೇಳ್ಬೇಡ . ನಾವೂ ಬೆಳಗ್ಗೆಯಿಂದ ರಾತ್ರಿ ತಂಕ ತಲೆ ಮ್ಯಾಲೆ ಒಂದು ನೆಳ್ಳು ಇಲ್ದೇ ಯಾಪಾರ ಮಾಡ್ತೀವಿ ಕಣವ್ವ . ನಮ್ಮ ಕಷ್ಟ ಕೇಳೋರು ಯಾರಿದ್ದರು ? " ಎಂದು ತನ್ನ ಪಾಡನ್ನು ಹೇಳಿಕೊಂಡಳು . ಈಗ ನನ್ನ ಹೆಂಡತಿಯು ಮತ್ತೆ ಚೌಕಾಸಿಗೆ ಹೋಗದೆ , ದುಡ್ಡನ್ನು ಕೊಟ್ಟಾಗ , ಹಣ್ಣನ್ನು ಕೈಗೆ ಇಡುತ್ತಾ , ತರಕಾರಿ ಅಮ್ಮ ಕೇಳಿದಳು- " ಮಕ್ಕಳು ಎಷ್ಟು ಜನ ? " " ಇಬ್ಬರು " " ಇನ್ನೊಂದು ಗಂಡೋ ಹೆಣ್ಣೋ ? " ಅಷ್ಟರಲ್ಲಿ ಅವರಿಬ್ಬರ ಮಾತಿನ ನಡುವೆ ನಾನು ತಲೆಹಾಕಿ - " ಹೆಣ್ಣು ಕಣಮ್ಮ . ಗೌತಮಿ ಅಂತ ಹೆಸರಿಟ್ಟಿದ್ದೀವಿ . ರತ್ನ....ವಜ್ರ ಅಂತ ಇಟ್ಟಿಲ್ಲ " ಎಂದಾಗ , ಆಕೆಯು ನಮ್ಮೊಡನೆ ಬಾಯ್ತುಂಬ ನಕ್ಕಳು .
ಪ್ರಸಂಗ-೩
ಕಳೆದ ಆರೇಳು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದೇನೆ . ಇಲ್ಲಿಗೆ ಬಂದ ಮೇಲೆ ದೊಡ್ಡ ದೊಡ್ಡ ಮಾಲ್ ಗಳಿಗೆ ಹೋಗಿಬರುವುದು ರೂಢಿಯಾಗಿದೆ. ಏನಾದರೂ ತರಲೆಂದು ಅಲ್ಲಿಗೆ ಹೋದಾಗ , ಕಣ್ಣು ಕೊರೈಸುವಂತಹ ಅಲ್ಲಿನ ವಾತಾವರಣದಲ್ಲಿ ಒಂದೆರಡು ಸುತ್ತು ತಿರುಗಿ , ಒಂದೆಡೆ ನಾನು ಕುಳಿತುಕೊಳ್ಳುತ್ತೇನೆ . ನನ್ನ ಹೆಂಡತಿಯು ಅಲ್ಲಿರುವ ವಸ್ತುಗಳ ಮೇಲೆ ಬರೆದಿರುವ ರೇಟುಗಳನ್ನು ಪರಿಶೀಲಿಸುತ್ತಾ , ಮನೆಗೆ ಬೇಕಾದ ಸಾಮಾನುಗಳನ್ನು ಎತ್ತಿಕೊಂಡು , ಕವರುಗಳಿಗೆ ಹಾಕಿಕೊಂಡು , ತಳ್ಳುವ ಗಾಡಿಯಲ್ಲಿ ತುಂಬಿಕೊಂಡು , ಬಿಲ್ ಹಾಕುವವರ ಬಳಿಗೆ ಬಂದು , ಹಣ ಕೊಟ್ಟು ಹೊರಬರುತ್ತಾಳೆ . ಎಲ್ಲಿಯೂ ಒಂದು ಮಾತಿಲ್ಲ.... ನೋವುನಲಿವಿನ ಮಾತುಕತೆಯಿಲ್ಲ ... ಯಾವುದೇ ಚೌಕಾಸಿಯಿಲ್ಲ .... ಜೀವಭಾವಗಳಿಲ್ಲದ ರೊಬಾಟ್ ಗಳಂತೆ ಕೈಕಾಲು ಅಲ್ಲಾಡಿಸುತ್ತಾ , ವ್ಯಾಪಾರ ಮುಗಿಸಿಕೊಂಡು ಬರುವ ಯಂತ್ರಗಳಾಗಿದ್ದೇವೆ .
ಮೊನ್ನೆ ಎಂದಿನಂತೆ ಒಂದು ಮಾಲ್ ಗೆ ಹೋಗಿ ಬಂದಾಗ , ಮನೆಯಲ್ಲಿ ನನ್ನ ಹೆಂಡತಿಯು ತಂದ ಹಣ್ಣು-ತರಕಾರಿಗಳ ಚೀಲದಲ್ಲಿದ್ದ ಒಂದು ಪರಂಗಿ ಹಣ್ಣನ್ನು ಕೈಗೆತ್ತಿಕೊಂಡು ನೋಡಿದೆ . ಸುಲಿದ ತೆಂಗಿನಕಾಯಿಗಿಂತ ಸ್ವಲ್ಪ ದಪ್ಪವಾಗಿದ್ದ ಆ ಹಣ್ಣಿನ ಮೇಲೆ ಅಂಟಿಸಿದ್ದ ರೇಟನ್ನು ಕಂಡು ಗಾಬರಿಯಾಗಿ-
" ಏನೇ , ಇದಕ್ಕೆ ಹದಿನೆಂಟು ರೂಪಾಯ ? " " ಹೂ ... ಹದಿನೆಂಟು ರೂಪಾಯಿ ." " ಯಾಕೆ ಹದಿನೆಂಟು ? " " ಅದರ ಮೇಲೆ ಬರೆದಿದೆ .... ಅದಕ್ಕೆ |
|
|
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ