ಬುಧವಾರ, ಸೆಪ್ಟೆಂಬರ್ 11, 2013

ಮಾತಿಗೊಂದು ಚೌಕಟ್ಟು

ಮಾತಿಗೊಂದು ಚೌಕಟ್ಟು


“ಮಾತು ಬಲ್ಲವನಿಗೆ ಜಗಳವಿಲ್ಲ
ಊಟ ಬಲ್ಲವನಿಗೆ ರೋಗವಿಲ್ಲ.”
ಎಂಬ ನಾಣ್ಣುಡಿಯು ಮಾತನಾಡುವಾಗ ನಾವು ಬಳಸಬೇಕಾದ ಭಾಷೆಯ ಬಗ್ಗೆ ಸಾಕಷ್ಟು ಎಚ್ಚರಿಕೆಯನ್ನು ಮತ್ತು ಮಾರ್ಗದರ್ಶನವನ್ನು ನೀಡುತ್ತದೆ. ಯಾವಾಗ? ಎಲ್ಲಿ? ಯಾರೊಡನೆ ಏಕೆ? ಹೇಗೆ? ಮಾತನಾಡಬೇಕೆಂಬ ಸೂಕ್ಷ್ಮ ಗಳನ್ನು ಅರಿತಿರುವವರನ್ನು ಮಾತು ಬಲ್ಲವರೆಂದು ಗುರುತಿಸುತ್ತಾರೆ.
ಪ್ರತಿನಿತ್ಯ ನಾನಾ ಸ್ಥಳಗಳಲ್ಲಿ ನಾವು ಮಾತಿನ ಮೂಲಕ ವ್ಯವಹರಿಸುತ್ತೇವೆ. ಕೌಟುಂಬಿಕ ನೆಲೆಯಾದ ಮನೆಯಲ್ಲಿ; ಸಾರ್ವಜನಿಕ ಸಂಸ್ಥೆಗಳಾದ ಶಾಲಾ, ಕಾಲೇಜು, ಆಸ್ಪತ್ರೆ ಹಾಗೂ ಬಹು ಬಗೆಯ ಕಛೇರಿಗಳಲ್ಲಿ; ದುಡಿಮೆಯನ್ನು ಮಾಡುವಂತಹ ನೆಲೆಗಳಲ್ಲಿ; ಸಿನಿಮಾ, ನಾಟಕ, ನೃತ್ಯ ಮುಂತಾದ ಮನರಂಜನೆಯ ಮಂದಿರಗಳಲ್ಲಿ; ಮದುವೆಯ ಮಂಟಪಗಳಲ್ಲಿ; ದೇಗುಲಗಳಲ್ಲಿ; ಅಂಗಡಿ ಮುಂಗಟ್ಟುಗಳಲ್ಲಿ; ಬೀದಿಗಳಲ್ಲಿ; ಸಂಚಾರ ಮಾಡುವ ವಾಹನಗಳಲ್ಲಿ; ಒಟ್ಟಿನಲ್ಲಿ ಹೇಳುವುದಾದರೆ, ಎಲ್ಲೆಲ್ಲಿ ಮಾನವರ ಚಟುವಟಿಕೆಗಳು ಇರುತ್ತವೆಯೋ ಅಲ್ಲೆಲ್ಲಾ ಇತರರೊಡನೆ ಮಾತನಾಡುತ್ತಿರುತ್ತೇವೆ.
ಒಂದು ಅಚ್ಚರಿ ಸಂಗತಿಯೆಂದರೆ ಎಲ್ಲರೊಡನೆಯೂ, ಎಲ್ಲಾ ಸ್ಥಳಗಳಲ್ಲಿಯೂ ‘ಒಂದೇ ಬಗೆಯ ಮಾತಿನ ಶೈಲಿಯನ್ನು’ ನಾವು ಬಳಸುವು ದಿಲ್ಲ. ಆಯಾಯ ಸಂದರ್ಭಕ್ಕೆ ತಕ್ಕಂತೆ ವಿವಿಧ ಬಗೆಯ ಮಾತುಗಳನ್ನು ಬಳಸುತ್ತೇವೆ. ಆದ್ದರಿಂದ ‘ಮಾತಿನ ಸಂದರ್ಭ’ ಯಾವುದೆಂಬುದು ಬಹು ಮುಖ್ಯವಾಗುತ್ತದೆ.
ಸಾಮಾಜಿಕ ಭಾಷಾ ವಿಜ್ಞಾನಿಗಳು ಕ್ರಿ.ಶ.1960 ರ ದಶಕದಿಂದ ಈ ನಿಟ್ಟಿನಲ್ಲಿ ಅನೇಕ ಸಂಶೋಧನೆಗಳನ್ನು ಮಾಡುತ್ತಾ, ಮಾತಿನ ಸಂದರ್ಭದಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶಗಳನ್ನು ಈ ಕೆಳಕಂಡಂತೆ ಗುರುತಿಸಿದ್ದಾರೆ.
1. ಸ್ಥಳ, ಕಾಲ ಮತ್ತು ಆವರಣ.
‘ಆವರಣ’ ಎಂದರೆ ಸುತ್ತಮುತ್ತಲಿನ ಭೌತಿಕ ಮತ್ತು ಸಾಂಸ್ಕೃತಿಕ ಸನ್ನಿವೇಶ.
2. ಮಾತಿನಲ್ಲಿ ಭಾಗಿಗಳಾಗುವ ವ್ಯಕ್ತಿಗಳು
ಅ. ಮಾತನಾಡುವವರು, ಆ. ಕೇಳುವವರು (ಯಾರನ್ನು ಉದ್ದೇಶಿಸಿ ಮಾತನಾಡಲಾಗುತ್ತದೆಯೋ ಅವರು) ಇ. ಆಡುವ ಮಾತುಗಳನ್ನು ಕೇಳಿಸಿಕೊಳ್ಳುವ ಇತರ ವ್ಯಕ್ತಿಗಳು.
3. ಮಾತಿನಲ್ಲಿ ಭಾಗಿಗಳಾದ ವ್ಯಕ್ತಿಗಳ ಸಾಮಾಜಿಕ ಸ್ಥಾನಮಾನಗಳು. ಲಿಂಗ, ವಯಸ್ಸು, ಜಾತಿ, ಮತ, ಆರ್ಥಿಕ ಸ್ಥಿತಿ, ಶಿಕ್ಷಣ, ಅಧಿಕಾರ, ದೈಹಿಕ ಸಾಮರ್ಥ್ಯ.
4. ಮಾತಿನಲ್ಲಿ ಭಾಗಿಗಳಾದ ವ್ಯಕ್ತಿಗಳ ಪರಸ್ಪರ ಸಂಬಂಧಗಳು, ನೆಂಟರು, ಸ್ನೇಹಿತರು, ಪರಿಚಿತರು, ಅಪರಿಚಿತರು, ಹಗೆಗಳು, ಗುರು ಶಿಷ್ಯರು, ಯಜಮಾನ, ಸೇವಕರು, ಅಧಿಕಾರಿ ನೌಕರರು, ಗಂಡ ಹೆಂಡತಿ, ವ್ಯಾಪಾರಿ ಗ್ರಾಹಕರು, ಉದ್ಯೋಗಿ ಸಾರ್ವಜನಿಕರು, ತಂದೆ ತಾಯಿ ಮಕ್ಕಳು.
5. ಮಾತನಾಡುತ್ತಿರುವುದರ ಉದ್ದೇಶ ಅಥವಾ ಮಾತಿನ ನಿಯೋಗಗಳು.
6. ಮಾತಿನಲ್ಲಿ ಪ್ರಸ್ತಾಪಗೊಳ್ಳುವ ವಿಷಯ.
7. ವಿಷಯವನ್ನು ಅಭಿವ್ಯಕ್ತಿಸುತ್ತಿರುವ ಮಾತಿನ ರೂಪಗಳು, ಶಿಷ್ಟಭಾಷೆ, ಉಪಭಾಷೆ, ನಾಗರಿಕ ಭಾಷೆ, ಗ್ರಾಮೀಣ ಭಾಷೆ, ಗೂಢ ಭಾಷೆ ಇತ್ಯಾದಿ.
8. ಮಾತುಗಳಿಗೆ ಪೂರಕವಾಗಿ ಒದಗಿ ಬರುವ ವ್ಯಕ್ತಿಯ ಆಂಗಿಕ ಹಾವಭಾವಗಳು ಮತ್ತು ಚಲನವಲನಗಳು.
9. ಮಾತನಾಡುವಾಗ ಕೇಳಿ ಬರುವ ಮಾತಿನ ಧ್ವನಿಯ ಏರಿಳಿತ.
10. ಮಾತಿನಲ್ಲಿ ಭಾಗಿಗಳಾದವರು ತಮ್ಮ ಉದ್ದೇಶಿತ ಗುರಿ ಸಾಧನೆಗಾಗಿ ಬಳಸುವ ತಂತ್ರ ಅಥವಾ ವಿಧಾನ.
11. ಮಾತಿನಿಂದ ಉಂಟಾಗುವ ಪರಿಣಾಮಗಳು.
ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಒಗ್ಗೂಡಿಸಿ, ಮಾತಿನ ಸಂದರ್ಭದ ನೆಲೆಯಲ್ಲಿ ಭಾಷೆಯು ಪಡೆಯುವ ಅರ್ಥವನ್ನು ತಿಳಿಯಬಹುದು.  ಶಬ್ದ ಗಳಿಗಿರುವ ಶಬ್ದಕೋಶದ ಅರ್ಥಕ್ಕಿಂತ ಮಿಗಿಲಾಗಿ, ಬಳಕೆಯ ಸಂದರ್ಭದಲ್ಲಿ ಶಬ್ದಗಳು ಪಡೆಯುವ ವಸ್ತುನಿಷ್ಠವಾದ ಹಾಗೂ ಭಾವನಾತ್ಮಕವಾದ ಅರ್ಥ ಗಳನ್ನು ಸ್ಪಷ್ಟವಾಗಿ ಗ್ರಹಿಸಬಹುದು. ಮಾತಿನ ಸಂದರ್ಭದಲ್ಲಿ ಪ್ರಯೋಗಗೊಳ್ಳುವ ಭಾಷೆಯು ಮಾತನಾಡುವವರು ಪರಸ್ಪರ ಹೊಂದಿರುವ ಭಾವನೆಗಳನ್ನು ಮತ್ತು ದೃಷ್ಠಿಕೋನಗಳನ್ನು ಪ್ರತಿಫಲಿಸುತ್ತದೆ. ಭಾಗಿಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳ ಬಗ್ಗೆಯೂ ಬೆಳಕನ್ನು ಚೆಲ್ಲುತ್ತದೆ.
ಅಗತ್ಯಗಳನ್ನು ಡೇರಿಸಿಕೊಳ್ಳುವುದು.
ಉದಾ : ಅಂಗಡಿಯೊಂದರಲ್ಲಿ ತರಕಾರಿಯನ್ನು ಕೊಂಡುಕೊಳ್ಳುವ ಸಂದರ್ಭ
ಗಿರಾಕಿ : ಹೆಂಗಪ್ಪ ಮೂಲಂಗಿ?
ವ್ಯಾಪಾರಿ : ಕೆ.ಜಿ. ಮೂರು ರೂಪಾಯಿ, ಸ್ವಾಮಿ
ಗಿರಾಕಿ : ಒಂದು ಕೆ.ಜಿ. ಕೊಡಿ
(ಗಿರಾಕಿಯ ಅಗತ್ಯವನ್ನು ವ್ಯಾಪಾರಿಯು ಮೂಲಂಗಿಯನ್ನು ತೂಗಿ ಕೊಡುವುದರ ಮೂಲಕ ಈಡೇರಿಸುತ್ತಾನೆ)
ಅನ್ಯರ ವರ್ತನೆಗಳನ್ನು ನಿಯಂತ್ರಿಸುವುದು.
ಉದಾ : ವಿದ್ಯಾರ್ಥಿಗಳು ಗದ್ದಲದಲ್ಲಿ ಮಗ್ನರಾಗಿದ್ದಾಗ, ತರಗತಿಯೊಳಕ್ಕೆ ಬಂದ ಅಧ್ಯಾಪಕರು, ಅವರನ್ನು ನಿಂಯತ್ರಿಸುವ ಸಂದರ್ಭ.
ಅಧ್ಯಾಪಕರು : (ಡಸ್ಟರನ್ನು ಟೇಬಲ್ಲಿನ ಮೇಲೆ ಜೋರಾಗಿ ಬಡಿದು, ಎತ್ತರದ ಧ್ವನಿಯಲ್ಲಿ)
ಏನಿದು ಗಲಾಟೆ? ಇದೇನ್ ಕ್ಲಾಸ್ ರೂಮೋ? ಸಂತೇನೋ? …….
(ವಿದ್ಯಾರ್ಥಿಗಳು ತಕ್ಷಣ ಮಾತನ್ನು ನಿಲ್ಲಿಸಿ, ಶಿಸ್ತಿನಿಂದ ವರ್ತಿಸ ತೊಡಗುತ್ತಾರೆ.)
ಅನ್ಯರ ಜೊತೆ ಸಂಪರ್ಕ ಪಡೆಯುವುದು.
ಉದಾ : ಬಸ್‌ಸ್ಟ್ಯಾಂಡಿನಲ್ಲಿ ಬಸ್ಸಿಗಾಗಿ ಕಾಯುತ್ತಾ, ಕುಳಿತಿರುವಾಗ, ಪಕ್ಕದಲ್ಲಿರುವ ಅಪರಿಚಿತ ವ್ಯಕ್ತಿಯನ್ನು ಪರಿಚಯಿಸಿಕೊಳ್ಳುವ ಸಂದರ್ಭ.
ವ್ಯಕ್ತಿ – 1 : ನೀವು ಯಾವ ಊರಿಗೆ?
ವ್ಯಕ್ತಿ – 2 : ಮಂಡ್ಯಕ್ಕೆ
ವ್ಯಕ್ತಿ – 1 : ನಾನೂ ಅಲ್ಲಿಗೇ ಬರ್ಬೇಕು. ಏನೋ ಸ್ವಾಮಿ, ಈ ಬಸ್ ಕಾಯೋದರಲ್ಲೇ ನಮ್ಮ ಜೀವಮಾನವೆಲ್ಲಾ ಮುಗ್ದೋಯ್ತು! ………. ಮಂಡ್ಯಕ್ಕೆ ಬರ್ತಾಯಿದ್ದೀರೋ? ಇನ್ನು ಮುಂದಕ್ಕೆ ಎಲ್ಲಾದ್ರೂ ಹೋಗ್ಬೇಕೋ?
ವ್ಯಕ್ತಿ – 2 : ಮಂಡ್ಯದ ಹತ್ತಿರ ಕೊತ್ತತ್ತಿಗೆ ಹೋಗ್ಬೇಕು,
(ಹೀಗೆ ಮಾತು ಮುಂದುವರಿದಂತೆಲ್ಲಾ ವ್ಯಕ್ತಿ – 2 ರ ವಿವರಗಳನ್ನೆಲ್ಲಾ ವ್ಯಕ್ತಿ – 1 ತಿಳಿದುಕೊಳ್ಳುತ್ತಾ, ತನ್ನ ವಿವರಗಳನ್ನು ತಿಳಿಸುತ್ತಾನೆ. ಅವರಿಬ್ಬರೂ ಪ್ರಯಾಣ ಕಾಲದಲ್ಲಿ ಸಹ ಪ್ರಯಾಣಿಕರಾಗಿ ಸಂಪರ್ಕ ಹೊಂದುತ್ತಾರೆ)
ವ್ಯಕ್ತಿತ್ವವನ್ನು ಪ್ರದರ್ಶಿಸುವುದು.
ಉದಾ: ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಕುರಿತ ಚರ್ಚೆ ಯಲ್ಲಿ ಭಾಗಿಗಳಾಗಿದ್ದವರು, ತಮ್ಮದೇ ಆದ ವಿಚಾರಗಳನ್ನು ಅಭಿವ್ಯಕ್ತಿಸುತ್ತಿರುವ ಸಂದರ್ಭ.
ವ್ಯಕ್ತಿ – 1 : ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಉತ್ತಮಪಡಿಸಬೇಕಾದರೆ, ವೃತ್ತಿಪರ ಶಿಕ್ಷಣವನ್ನು ಎಲ್ಲಾ ಕಡೆ ಜಾರಿಗೆ ತರಬೇಕು. ಈ ದಿಕ್ಕಿನಲ್ಲಿ ಮೊದಲ ಹೆಜ್ಜೆ ಎಂದರೆ ಈಗಿರುವ ಸಾಮಾನ್ಯ ಪದವಿ ನೀಡುತ್ತಿರುವ ಪ್ರಥಮ ದರ್ಜೆ ಕಾಲೇಜುಗಳನ್ನೆಲ್ಲಾ ಈ ಕ್ಷಣದಿಂದಲೇ ಮುಚ್ಚಬೇಕು.
ವ್ಯಕ್ತಿ – 2 : ರೋಗ ಬಂದರೆ, ರೋಗಿಯನ್ನೇ ಕೊಲ್ಲಬೇಕು ಎಂಬಂತಿದೆ ನಿಮ್ಮ ವಾದ. ಕಾಲೇಜುಗಳನ್ನು ಮುಚ್ಚುವುದು ಸರಿಯಲ್ಲ. ಶಿಕ್ಷಣ ನೀಡುವ ಕ್ರಮದಲ್ಲಿ ಸುಧಾರಣೆಗಳನ್ನು ತರಬೇಕು.
(ಹೀಗೆ ಅಲ್ಲಿದ್ದವರೆಲ್ಲಾ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವುದರ ಮೂಲಕವೇ, ತಮ್ಮ ವ್ಯಕ್ತಿತ್ವದ ವಿಶೇಷವನ್ನು ಪ್ರಕಟಿಸುತ್ತಾರೆ)
ನಾನಾ ಬಗೆಯ ವಿಷಯಗಳನ್ನು ಪರಿಶೋಧಿಸುವುದು.
ಉದಾ: ಗ್ರಾಮವೊಂದರಲ್ಲಿ ಸಾಮಾಜಿಕ ಸಂಗತಿಗಳನ್ನು ಪರಿಶೋಧಿಸಿ, ಸಂಗ್ರಹಿಸುವ ಸಂದರ್ಭ.
ಸಂಶೋಧಕರು : ನಿಮ್ಮೂರಿನ ಜನಸಂಖ್ಯೆ ಎಷ್ಟು?
ವಕ್ತೃ : ಎರಡು ಸಾವಿರ.
ಸಂಶೋಧಕರು : ಜನರ ಪ್ರಮುಖ ವೃತ್ತಿ ಯಾವುದು?
ವಕ್ತೃ : ವ್ಯವಸಾಯ.
ಸಂಶೋಧಕರು : ಯಾವ ಯಾವ ಬೆಳೆ ಬೆಳೀತೀರಿ?
ವಕ್ತೃ : ಕಬ್ಬು, ಭತ್ತ, ರಾಗಿ.
(ಹೀಗೆ ಪ್ರಶ್ನೆ-ಉತ್ತರಗಳು ಮುಂದುವರಿಯುತ್ತಾ, ಆ ಗ್ರಾಮದಲ್ಲಿನ ಜಾತಿ ವ್ಯವಸ್ಥೆ, ಲಭಿಸುವ ಶಿಕ್ಷಣ ವ್ಯವಸ್ಥೆ, ಆರ್ಥಿಕ ಸ್ಥಿತಿಗತಿಗಳು ಮುಂತಾದ ಅಂಶಗಳನ್ನೆಲ್ಲಾ ಸಂಶೋಧಕರು ಸಂಗ್ರಹಿಸುತ್ತಾರೆ)
ಹೊಸ ಮಾಹಿತಿಗಳನ್ನು ಇತರರಿಗೆ ತಿಳಿಸುವುದು
ಉದಾ: ಆರೋಗ್ಯ ಇಲಾಖೆಯ ಕಾರ್ಯಕರ್ತರೊಬ್ಬರು ಸಭೆಯೊಂದರಲ್ಲಿ ಏಡ್ಸ್ ರೋಗದ ಬಗ್ಗೆ ಮಾಹಿತಿಗಳನ್ನು ನೀಡುತ್ತಿರುವ ಸಂದರ್ಭ.
ಕಾರ್ಯಕರ್ತ: ನೋಡಿ, ಈ ರೋಗಕ್ಕೆ ಮದ್ದಿಲ್ಲ. ಈ ರೋಗಕ್ಕೆ ತುತ್ತಾದ ವ್ಯಕ್ತಿಗೆ ಸಾವು ಕಟ್ಟಿಟ್ಟ ಬುತ್ತಿ. ಇದು ಪ್ರಮುಖವಾಗಿ ಅಕ್ರಮ ಲೈಂಗಿಕ ಸಂಬಂಧದಿಂದ ಬರುತ್ತದೆ. …………
(ಹೀಗೆ ಮಾತನ್ನು ಮುಂದುವರಿಸುತ್ತಾ, ರೋಗ ಬರುವುದಕ್ಕೆ ಪ್ರಮುಖ ಕಾರಣಗಳು, ರೋಗದ ಲಕ್ಷಣಗಳು, ರೋಗ ಬರದಂತೆ ಜನತೆ ತಾಳಬೇಕಾದ ಎಚ್ಚರಿಕೆಯ ಬಗ್ಗೆ ಮಾಹಿತಿಗಳನ್ನು ನೀಡುತ್ತಾರೆ.)
ಮಾತಿನ ಸಂದರ್ಭ 1
ಸಾಮಾಜಿಕ ನೆಲೆಯಲ್ಲಿ ಮಾತುಗಳು ಪ್ರಯೋಗಗೊಂಡಾಗ ಪಡೆಯುವ ವಿಭಿನ್ನವಾದ ಅರ್ಥಗಳನ್ನು ಈ ಕೆಳಕಂಡ ಉದಾಹರಣೆಯಿಂದ ತಿಳಿಯ ಬಹುದು.
“ಏನೋ ಬೋಳಿಮಗ್ನೆ, ಈಗ ಬತ್ತಾಯಿದ್ದೀಯ”
ಕೆಲಸಕ್ಕೆ ತಡವಾಗಿ ಬರುತ್ತಿರುವ ಆಳನ್ನು ಕುರಿತು ಯಜಮಾನನು ಆಕ್ರೋಶದ ಧ್ವನಿಯಲ್ಲಿ ನುಡಿದಾಗ, ಈ ಮಾತುಗಳು ಬಯ್ಗುಳದ ಅರ್ಥವನ್ನು ಹೊಂದುತ್ತವೆ. ಇದರ ಜೊತೆಗೆ ಯಜಮಾನನು ಆರ್ಥಿಕ ಉತ್ತಮ ಸ್ಥಿತಿಯಲ್ಲಿರುವುದನ್ನು ಮತ್ತು ಸಾಮಾಜಿಕವಾಗಿ ಆಳಿಗಿಂತ ಮೇಲಿನ ಸ್ಥಾನದಲ್ಲಿರುವುದನ್ನು ಸೂಚಿಸುತ್ತಿವೆ. ಆಳನ್ನು ಕೀಳಾಗಿ ಕಾಣುವ ಬಂಡವಾಳಶಾಹಿ ಸಂಸ್ಕೃತಿಯ ಅಹಂಭಾವವನ್ನು ನಿರ್ದೇಶಿಸುತ್ತಿವೆ.
ಮಾತಿನ ಸಂದರ್ಭ 2
ಭೋಜನಕ್ಕೆ ಆಹ್ವಾನವನ್ನು ಪಡೆದಿದ್ದ ಗೆಳೆಯನು ತಡವಾಗಿ ಬರುತ್ತಿರುವುದನ್ನು ಕಂಡು, ಆತನಿಗಾಗಿ ಕಾದು ಕಾದು ಬೇಸರಗೊಂಡಿದ್ದ ವ್ಯಕ್ತಿಯೊಬ್ಬನು ಈ ಮಾತುಗಳನ್ನಾಡಿದಾಗ, ಅವರಿಬ್ಬರ ನಡುವಣ ಗೆಳೆತನದ ಆತ್ಮೀಯತೆಗೆ ಸಂಕೇತವಾಗುತ್ತವೆ. ಬಯ್ಗುಳದ ಛಾಯೆ ಸಂಪೂರ್ಣ ಮರೆಯಾಗಿ, ಬಯ್ಗುಳದ ಶಬ್ದವೇ ಸ್ನೇಹದ ಸಂಬಂಧವನ್ನು ಎತ್ತಿತೋರಿಸುವ ಮಹತ್ವವನ್ನು ಪಡೆಯುತ್ತದೆ. ಈ ಇಬ್ಬರು ಗೆಳೆಯರ ಸಮಾನವಾದ ಸಾಮಾಜಿಕ ಅಂತಸ್ತನ್ನು ಈ ಮಾತುಗಳು ಸೂಚಿಸುತ್ತವೆ.
ಭಾಷೆಯಲ್ಲಿನ ಯಾವುದೇ ಶಬ್ದಗಳು ತಮಗೆ ತಾವೇ ‘ಕೆಟ್ಟದ್ದು ಅಥವಾ ಒಳ್ಳೆಯದು’ ಆಗಿರುವುದಿಲ್ಲ. ಪ್ರಯೋಗಿಸುವ ಸಂದರ್ಭದ ಹಿನ್ನೆಲೆಯಲ್ಲಿ ಶಬ್ದದ ಅರ್ಥ ನಿರ್ಧಾರಿತವಾಗುತ್ತದೆ. ಶಬ್ದಗಳ ಅರ್ಥದ ಔಚಿತ್ಯವು ಪ್ರಯೋಗಿಸುವ ವ್ಯಕ್ತಿಗಳ ವ್ಯಕ್ತಿತ್ವ ಮತ್ತು ಹೊಣೆಗಾರಿಕೆಯೊಡನೆ ಸಂಗತ ಗೊಂಡಿರುತ್ತದೆ.
ಯಾವುದೇ ಮಾತಿನ ಸಂದರ್ಭದಲ್ಲಿ ನಾವು ಪ್ರಮುಖವಾಗಿ ಗಮನಿಸ ಬೇಕಾದ ಮತ್ತೊಂದು ಅಂಶವೆಂದರೆ ಮಾತಿನಲ್ಲಿ ಭಾಗಿಗಳಾದ ವ್ಯಕ್ತಿಗಳು ಯಾವುದೇ ಉದ್ದೇಶವಿಲ್ಲದೆ, ಯಾವುದೇ ರೀತಿಯನ್ನು ಅನುಸರಿಸದೆ, ಏನನ್ನೋ ಬಾಯಿಗೆ ಬಂದಂತೆ ಮಾತವಾಡುವಂತಿಲ್ಲ. ಏಕೆಂದರೆ ಯಾವುದೇ ಒಂದು ಮಾತಿನ ಸಮುದಾಯದಲ್ಲಿ ಮಾತಿನ ಚಟುವಟಿಕೆಯು ನಿಯಮ ಬದ್ದವಾಗಿ ರೂಪುಗೊಂಡಿರುತ್ತದೆ. ಭಾಷಿಕ ರಚನೆಗಳಿಗೆ ವ್ಯಾಕರಣ ನಿಯಮಗಳು ಇರುವಂತೆಯೇ, ಮಾತನಾಡುವಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ನಿಯಮಗಳಿರುತ್ತವೆ. ಆದ್ದರಿಂದಲೇ ಯಾವುದೇ ವ್ಯಕ್ತಿ ಭಾಷೆಯ ಮೂಲಕ ವ್ಯವಹರಿಸುವಾಗ ಮಾತಿನ ಸಮುದಾಯದ ಭಾಷೆಯ ನಿಯಮಗಳನ್ನು ಮತ್ತು ವ್ಯಕ್ತಿಗಳ ಭಾಷಿಕ ವರ್ತನೆಗಳನ್ನು ಚೆನ್ನಾಗಿ ಅರಿತಿರಬೇಕು.
ಉದಾಹರಣೆ:
“ರಾಮನು ಕಾಡಿಗೆ ಹೋದಳು. ಅವನೊಡನೆ ಸೀತೆಯೂ ಕಾಡಿಗೆ ಹೋದನು.
ಈ ಮೇಲ್ಕಂಡ ವಾಕ್ಯಗಳನ್ನು ಓದುತ್ತಿದ್ದಂತೆಯೇ ಅಥವಾ ಕೇಳು ತ್ತಿದ್ದಂತೆಯೇ ವಾಕ್ಯದ ರಚನೆಯಲ್ಲಿರುವ ದೋಷವನ್ನು ಕನ್ನಡ ಭಾಷೆಯನ್ನು ಅರಿತಿರುವ ಪ್ರತಿಯೊಬ್ಬರು ಗುರುತಿಸುತ್ತಾರೆ. ವಾಕ್ಯದಲ್ಲಿನ ನಾಮಪದಗಳ ಲಿಂಗಕ್ಕೆ ಅನುಗುಣವಾಗಿಯೇ ಕ್ರಿಯಾಪದವು ಪ್ರಯೋಗಗೊಳ್ಳಬೇಕೆಂಬುದು ವ್ಯಾಕರಣದ ನಿಯಮ ಆದ್ದರಿಂದ ಮೇಲ್ಕಂಡ ವಾಕ್ಯಗಳು
“ರಾಮನು ಕಾಡಿನ ಹೋದನು. ಅವನೊಡನೆ ಸೀತೆಯೂ ಕಾಡಿಗೆ ಹೋದಳು”. ಎಂದು ಪ್ರಯೋಗಗೊಳ್ಳಬೇಕು.
ಭಾಷಿಕ ರಚನೆಗೆ ನಿರ್ದಿಷ್ಟವಾದ ನಿಯಮಗಳು ಮತ್ತು ಲಕ್ಷಣಗಳು ಇರುವಂತೆಯೇ, ಯಾವ ಯಾವ ಬಗೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳಲ್ಲಿ, ಯಾವ ಬಗೆಯ ಭಾಷೆಯನ್ನು, ಯಾರು, ಯಾರಿಗೆ ಬಳಸಬೇಕೆಂಬುದರ ಬಗ್ಗೆಯೂ ಅಲಿಖಿತ ನಿಯಮಗಳಿರುತ್ತವೆ. ಈ ನಿಯಮಗಳನ್ನು ಮಾತಿನ ಸಮುದಾಯದ ಸದಸ್ಯರೇ ರೂಪಿಸಿಕೊಂಡು, ಪ್ರತಿ ನಿತ್ಯ ತಮ್ಮ ಪರಸ್ಪರ ಕ್ರಿಯಾತ್ಮಕವಾದ ವ್ಯವಹಾರಗಳಲ್ಲಿ ಸಂದರ್ಭಕ್ಕೆ ಸೂಕ್ತವಾದ ಭಾಷೆಯನ್ನು ಬಳಸುತ್ತಾರೆ.
ಪರಸ್ಪರ ಭೇಟಿಯಾದಾಗ, ಕುಶಲ ಪ್ರಶ್ನೆಗಳನ್ನು ಕೇಳುವಾಗ, ಅಭಿನಂದಿಸುವಾಗ, ಬೀಳ್ಕೊಳ್ಳುವಾಗ, ನೋವು ನಲಿವಿನ ವಿಷಯಗಳನ್ನು ತಿಳಿಸುವಾಗ, ಪ್ರಮುಖವಾದ ವಿಷಯಗಳನ್ನು ಚರ್ಚಿಸುವಾಗ, ಹೀಗೆ ಇಂತಹ ಹತ್ತಾರು ಬಗೆಯ ಮಾತಿನ ಸಂದರ್ಭಗಳಲ್ಲಿ ಯಾವ ಬಗೆಯ ಮಾತು ಗಳನ್ನು ಆಡಬೇಕೆಂಬುದು ಪೂರ್ವ ನಿರ್ಧಾರಿತವಾಗಿರುತ್ತದೆ. ಇದೇ ರೀತಿ ಕೌಟುಂಬಿಕ ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಜಾತಿ ಮತ ಸಂಬಂಧವಾದ ಸಾಂಪ್ರದಾಯಿಕ ಆಚರಣೆಗಳಲ್ಲಿ, ಭೋಜನ ಕೂಟಗಳಲ್ಲಿ ಮತ್ತು ಭಾಷೆ ಜೊತೆಗೂಡಿರುವ ಯಾವುದೇ ಸಂದರ್ಭಗಳಲ್ಲಿ  ಯಾವ ಬಗೆಯ ಮಾತುಗಳನ್ನು ಆಡಬೇಕೆಂಬುದನ್ನು ಮಾತಿನ ಸಮುದಾಯದ ಸದಸ್ಯರು ಚೆನ್ನಾಗಿ ಬಲ್ಲವರಾಗಿರುತ್ತಾರೆ.
ಯಾವುದೇ ಮಾತಿನ ಸಂದರ್ಭದಲ್ಲಿ ಕೇಳಿ ಬರುತ್ತಿರುವ ಪದಗಳ ಮೂಲಕವಾಗಿಯೇ, ಮಾತಿನಲ್ಲಿ ಭಾಗಿಗಳಾಗಿರುವ ವ್ಯಕ್ತಿಗಳ ಸಾಮಾಜಿಕ  ಅಂತಸ್ತನ್ನು, ಹೊಣೆಗಾರಿಕೆಯನ್ನು ಮತ್ತು ಸಾಂಸ್ಕೃತಿಕ ವ್ಯಕ್ತಿತ್ವವನ್ನು ತಿಳಿಯ ಬಹುದು.
ಅಜ್ಜ, ಅಜ್ಜಿ, ತಂದೆ ತಾಯಿ, ಅಣ್ಣ ತಮ್ಮ, ಅಕ್ಕ ತಂಗಿ, ಅತ್ತೆ ಮಾವ, ಹೆಂಡತಿ ಮಕ್ಕಳು ಮತ್ತು ಇತರ ಬಂಧುಗಳೊಡನೆ ಮಾತನಾಡುವಾಗ ವಿವಿಧ ಬಗೆಯ ಸಂಬೋಧನೆಯ ಪದಗಳನ್ನು ಮತ್ತು ಗೌರವ ಸೂಚಕವಾಗಿ ಕೆಲವರಿಗೆ ಬಹುವಚನಗಳನ್ನು ಪ್ರಯೋಗಿಸಲಾಗುತ್ತದೆ. ಕೌಟುಂಬಿಕ ನೆಲೆಯಲ್ಲಿ ಪ್ರಯೋಗಗೊಳ್ಳುವ ಭಾಷೆಯು ಕುಟುಂಬದ ವ್ಯಕ್ತಿಗಳ ವಯಸ್ಸು, ಲಿಂಗ ಮತ್ತು ಕುಟುಂಬದಲ್ಲಿ ಅವರು ಹೊಂದಿರುವ ಜವಾಬ್ದಾರಿ ಸ್ಥಾನಕ್ಕೆ ಅನುಗುಣ ವಾಗಿರುತ್ತದೆ.
ಸಾರ್ವಜನಿಕ ಕ್ಷೇತ್ರಗಳಾದ ಸಂಘ ಸಂಸ್ಥೆಗಳಲ್ಲಿ ಮತ್ತು ಕಛೇರಿಗಳಲ್ಲಿ ವ್ಯಕ್ತಿಗಳು ಹೊಂದಿರುವ ಅಧಿಕಾರದ ಸ್ಥಾನವೇ ಮುಖ್ಯವಾಗಿ ‘ಅಲ್ಲಿ ಪ್ರಯೋಗಗೊಳ್ಳುವ ಭಾಷೆಯನ್ನು’ ನಿಯಂತ್ರಿಸುತ್ತದೆ. ಉನ್ನತ ಅಧಿಕಾರ ದಲ್ಲಿರುವವರು ತಮ್ಮ ಕೈ ಕೆಳಗಿನ ನೌಕರರನ್ನು, ಅವರ ವಯಸ್ಸಿನ ಹಿರಿತನ ವನ್ನು ಅಷ್ಟಾಗಿ ಗಮನಿಸದೆ, ಸಾಮಾನ್ಯವಾಗಿ ಏಕವಚನದಲ್ಲಿ ಸಂಬೋಧಿಸುತ್ತಾರೆ. ಅಧಿಕಾರದ ಅಂತರ ಕಡಿಮೆಯಾದಷ್ಟು ಏಕವಚನ ಸ್ಥಾನದಲ್ಲಿ ಬಹುವಚನ ಪ್ರಯೋಗಗೊಳ್ಳುತ್ತದೆ. ಆದರೆ ಉನ್ನತ ಅಧಿಕಾರದಲ್ಲಿರುವವರನ್ನು ಇತರರು ಬಹುವಚನದಲ್ಲೇ ಸಂಬೋಧಿಸುತ್ತಾರೆ.
ಪ್ರತಿಯೊಂದು ಮಾತಿನ ಸಮುದಾಯವು ತನ್ನದೆ ಆದ ರೀತಿಯಲ್ಲಿ ‘ಮಾತನಾಡುವಿಕೆಯ ನಿಯಮ’ಗಳನ್ನು ರೂಪಿಸಿಕೊಂಡಿರುತ್ತದೆ. ಈ ನಿಯಮ ಗಳು ಆಯಾಯ ಸಮುದಾಯದ ಸಾಮಾಜಿಕ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಆಚರಣೆಗಳಿಗೆ ಹೊಂದಿಕೊಂಡಿರುತ್ತವೆ.
ಉದಾಹರಣೆ:
“ನಮಸ್ಕಾರ ಸ್ವಾಮಿ, ಚೆನ್ನಾಗಿದ್ದೀರಾ?”
ಹಿಂದೂ ಸಂಸ್ಕೃತಿಯ ಜನ ಸಮುದಾಯದಲ್ಲಿನ ಮಧ್ಯಮ ವರ್ಗದ ಜನರು, ತಮ್ಮ ಸಮಾನ ಸಾಮಾಜಿಕ ಅಂತಸ್ತಿನ ಅಥವಾ ತಮಗಿಂತ ಮೇಲು ಅಂತಸ್ತಿನ ಪರಿಚಿತರನ್ನು ಭೇಟಿ ಮಾಡಿದಾಗ, ಮೇಲ್ಕಂಡ ನುಡಿಗಳನ್ನಾಡುತ್ತಾ, ಕೈ ಮುಗಿಯುತ್ತಾರೆ.
ಇಸ್ಲಾಂ ಸಂಸ್ಕೃತಿಯ ಮುಸಲ್ಮಾನರು, ಕ್ರೈಸ್ತ ಸಂಸ್ಕೃತಿಯ ಪಾಶ್ಚಿಮಾತ್ಯರು ಮತ್ತು  ಆಪ್ರಿಕಾ-ಅಮೆರಿಕನ್ ಸಂಸ್ಕೃತಿಯ ಜನಸಮುದಾದವರು  ಪರಸ್ಪರ ಭೇಟಿಯಾದಾಗ ಆಡುವ ಮಾತುಗಳು ಮತ್ತು ಆಂಗಿಕ ಚಲನವಲನಗಳು ಹಿಂದೂ ಸಂಸ್ಕೃತಿ ಮತ್ತು ಸಮಾಜದ ಮಾತಿನ ಸಮುದಾಯದವರಿಗಿಂತಲೂ ಭಿನ್ನವಾಗಿರುತ್ತವೆ. ಆದ್ದರಿಂದ ಯಾವುದೇ ವ್ಯಕ್ತಿ ತನ್ನ ನಿತ್ಯ ಜೀವನದಲ್ಲಿ  ಭಾಷೆಯ ಮೂಲಕ ಅನ್ಯರೊಡನೆ ವ್ಯವಹರಿಸುವಾಗ, ಅವರು ಪ್ರತಿನಿಧಿಸುವ ಸಮುದಾಯದಲ್ಲಿನ ಮಾತನಾಡು ವಿಕೆಯ ನಿಯಮಗಳನ್ನು ಚೆನ್ನಾಗಿ ಅರಿತಿರಬೇಕು.
ಹಿಂದೂ ಸಂಸ್ಕೃತಿಯನ್ನು ಒಳಗೊಂಡಿರುವ ನಮ್ಮ ಸಾಮಾಜಿಕ ಜೀವನವು ಜಾತಿ ವ್ಯವಸ್ಥೆಯಿಂದ ಕೂಡಿದೆ. ನಮ್ಮ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಜಾತಿ ಶ್ರೇಣಿಯ ಯಾವುದಾದರೊಂದು ಹಂತದಲ್ಲಿದ್ದಾನೆ. ಬಡವ, ಮಧ್ಯಮ ಮತ್ತು ಶ್ರೀಮಂತ ಎಂಬ ವರ್ಗ ಭೇದಗಳು ನಮ್ಮ ಸಮಾಜದಲ್ಲಿವೆ. ಈ ಬಗೆಯ ಜಾತಿ ಮತ್ತು ವರ್ಗ ಭೇದಗಳ ಸಾಮಾಜಿಕ ಜೀವನವು ನಮ್ಮ ಸಮುದಾಯದ ಮಾತಿನ ಅಭಿವ್ಯಕ್ತಿಯ ಮೇಲೆ ಪ್ರಭಾವವನ್ನು ಬೀರಿ, ಹಲವು ಬಗೆಯ ನಿಯಮಗಳನ್ನು ರೂಪಿಸಿದೆ ಹಾಗೂ ನಿಯಂತ್ರಣಗಳನ್ನು ಹಾಕಿದೆ.
ಇದೇ ರೀತಿ ಜಗತ್ತಿನ ಎಲ್ಲೆಡೆಯಲ್ಲಿಯೂ ನಾನಾ ಬಗೆಯ ಮಾತಿನ ಸಮುದಾಯಗಳಲ್ಲಿರುವ ಜಾತಿ, ವರ್ಗ, ವರ್ಣ ಮತ್ತು ಲಿಂಗ ಭೇದಗಳಿಗೆ ಅನುಸಾರವಾಗಿ ಮಾತನಾಡುವಿಕೆಯ ನಿಯಮಗಳು ರೂಪುಗೊಂಡು, ಮಾತಿನ ಸಂದರ್ಭದ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರುತ್ತವೆ.
ಗಾದೆಗಳು
ಜನ ಸಾಮಾನ್ಯರು ತಮ್ಮ ಪ್ರತಿನಿತ್ಯದ ಮಾತುಕತೆಯ ಸಂದರ್ಭದಲ್ಲಿ ತಾವು ಹೇಳಬೇಕಾಗಿರುವ ವಿಷಯವನ್ನು ಮತ್ತಷ್ಟು ಸ್ಪಷ್ಟವಾಗಿ ನಿರೂಪಿಸುವ ಉದ್ದೇಶದಿಂದ, ತಾವಾಡುವ ಮಾತುಗಳ ಮಧ್ಯೆ ಮಧ್ಯೆ ಗಾದೆಗಳನ್ನು ಬಳಸುತ್ತಾರೆ. “ಹತ್ತು ಕಟ್ಟುವ ಕಡೆ, ಒಂದು ಮುತ್ತು ಕಟ್ಟು” ಎಂಬ ಗಾದೆಯಂತೆ ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೇಳುವಂತಹ ಶಕ್ತಿಯು ಗಾದೆ ಮಾತುಗಳಿಗಿದೆ.
ಉದಾಹರಣೆಗೆ : ಅಂಗಡಿಯೊಂದರಲ್ಲಿ ಅಕ್ಕಿಯನ್ನು ಕೊಂಡುಕೊಳ್ಳಲೆಂದು ಬಂದ ಸುಮಾರು ಐವತ್ತು ವರ್ಷದ ಹೆಂಗಸೊಬ್ಬಳು ಅಂಗಡಿಯಲ್ಲಿದ್ದ ಎರಡು ತರದ ಅಕ್ಕಿಯನ್ನು ನೋಡಿ, ವರ್ತಕನಲ್ಲಿ ಕಳಪೆ ದರ್ಜೆಯ ಅಕ್ಕಿಗೆ ಕಡಿಮೆ ದರವನ್ನು ಮತ್ತು ಉತ್ತಮ ದರ್ಜೆಯ ಅಕ್ಕಿಗೆ ಹೆಚ್ಚಿನ ದರವನ್ನು ಹೇಳಿದಾಗ, ಕೆಲವು ಕ್ಷಣ ಎರಡು ತರದ ಅಕ್ಕಿಯನ್ನು ಕೈಯಲ್ಲಿ ಹಿಡಿದುಕೊಂಡು, ಗುಣಮಟ್ಟವನ್ನು ಪರಿಶೀಲಿಸುತ್ತಿದ್ದು, ಅನಂತರ ವರ್ತಕನನ್ನು ಕುರಿತು,
“ಮೂರ್ಕಾಸು ಕೊಟ್ಟು ಮುದುಕಿ ಕಟ್ಕೊಳ್ಳೋದಕ್ಕಿಂತ, ಆರ್ಕಾಸು ಕೊಟ್ಟು ಹರೇದೋಳ್ನೆ ಕಟ್ಕೊಳ್ಳೋದು ಮೇಲಲ್ವೆ”
ಎಂದಳು. ಅವಳ ಇಂಗಿತವನ್ನು ಮತ್ತು ಆಯ್ಕೆಯನ್ನು ಅರಿತ ವರ್ತಕನು ಉತ್ತಮ ದರ್ಜೆಯ ಅಕ್ಕಿಯನ್ನು ತೂಗಿ ಕೊಟ್ಟನು.
ಮೊಸರನ್ನು ಕಡೆದಾಗ ಬೆಣ್ಣೆ ಬರುವಂತೆ, ಜನಮನದಲ್ಲಿ ಸಾವಿರಾರು ಬಗೆಯ ಜೀವನಾನುಭವಗಳು ಚೆನ್ನಾಗಿ ಮಂಥನಗೊಂಡು, ಸೂಕ್ತ ಸಂದರ್ಭದಲ್ಲಿ ವಿವೇಕಿಯಾದ ವ್ಯಕ್ತಿಯೊಬ್ಬನ ಅಥವಾ ಒಬ್ಬಳ ಬಾಯಿಂದ ಗಾದೆಯ ನುಡಿಗಳಾಗಿ ಹೊರಹೊಮ್ಮಿವೆ. “ವೇದ ಸುಳ್ಳಾದರೂ, ಗಾದೆ ಸುಳ್ಳಾಗುವುದಿಲ್ಲ”ವೆಂಬ ಮಾತಿದೆ. ಅಂದರೆ ವೇದಗಳನ್ನು ರಚಿಸಿದವರು ಹಲವು ಮಂದಿ ಋಷಿಗಳು. ಕೆಲವು ಋಷಿಗಳು ಆಡಿದ ವಾಣಿ ಸುಳ್ಳಾಗಬಹುದು. ಆದರೆ ಸಾವಿರಾರು ಮಂದಿಯ ಜೀವನದ ನೋವು ನಲಿವುಗಳಿಂದ ಮತ್ತು ಮಾನವ ಜೀವನದ ಸೂಕ್ಷ್ಮವಾದ ಒಳನೋಟಗಳಿಂದ ಕೂಡಿ ಅನುಭವದ ವಾಣಿಯಾಗಿ ಮೂಡಿ ಬಂದಿರುವ ಗಾದೆಗಳು ಸುಳ್ಳಾಗುವುದಕ್ಕೆ ಸಾಧ್ಯವಿಲ್ಲ. ಗಾದೆಗಳ ಸೃಷ್ಟಿಯಲ್ಲಿ ಗ್ರಾಮೀಣ ಜನರ ಕೊಡುಗೆ ಅಧಿಕವಾಗಿದೆ.
ಗ್ರಾಮೀಣ ಪ್ರದೇಶದಲ್ಲಿನ ಜನರು ಗಾದೆಗಳನ್ನು ಅಧಿಕವಾಗಿ ಬಳಸುತ್ತಾರೆ. ಅಕ್ಷರ ಕಲಿತಿರುವ ನಾಗರಿಕರ ದೈನಂದಿನ ಮಾತುಕತೆಯಲ್ಲಿ ಗಾದೆಗಳ ಬಳಕೆ ಬಹಳ ಕಡಿಮೆ. ಗಾದೆಯನ್ನು ಬಳಸುವಂಥ ಸಂದರ್ಭ ಬಂದಾಗ “ಅದೇನೋ, ಗಾದೆ ಹೇಳ್ತಾರಲ್ಲ! ಹಾಗೆ” ಎಂದು ನುಡಿದು ಮಾತನ್ನು ಮುಂದುವರಿಸುತ್ತಾರೆ.
ಒಂದು ನಾಣ್ಯಕ್ಕೆ ಎರಡು ಮುಖಗಳಿರುಂತೆ, ಪ್ರತಿಯೊಂದು ಗಾದೆಯಲ್ಲಿಯೂ ಲೋಕಾನುಭವ ಮತ್ತು ಲೋಕನೀತಿಯ ವಿಚಾರಗಳಿರುತ್ತವೆ.
ಉದಾಹರಣೆ : ‘ತುಂಬಿದ ಕೊಡ ತುಳುಕುವುದಿಲ್ಲ’. ವಿದ್ಯೆ, ಅಧಿಕಾರ ಮತ್ತು ಸಂಪತ್ತನ್ನು ಪಡೆದಿದ್ದರೂ, ವಿನಯಶೀಲವಾದ ನಡೆ ನುಡಿಗಳನ್ನು ಹೊಂದಿರುವ ವ್ಯಕ್ತಿಯ ಬಗ್ಗೆ ಮಾತನಾಡುವಾಗ “ತುಂಬಿದ ಕೊಡ ತುಳುಕುವುದಿಲ್ಲ” ಎನ್ನುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ಅಹಂಕಾರದಲ್ಲಿ ವರ್ತಿಸುವವರನ್ನು ಕಂಡಾಗ  “ಅಲ್ಪ ವಿದ್ಯೆ ಮಹಾಗರ್ವಿ” ಅಥವಾ “ಸಿರಿ ಬಂತು ಅಂತ ಅರ್ಧ ರಾತ್ರೀಲಿ ಕೊಡೆ ಹಿಡ್ಕೊಂಡು ಹೊರಟ” ಎಂದು ವ್ಯಂಗ್ಯವಾಡುತ್ತಾರೆ. ನಾನಾ ಬಗೆಯ ಗಾದೆಗಳನ್ನು ವಿವಿಧ ಬಗೆಯ ಮಾತಿನ ಸಂದರ್ಭಗಳಲ್ಲಿ ಸೂಕ್ತವಾಗಿ ಬಳಸಿದಾಗ, ಮಾತಿನಲ್ಲಿ ಭಾಗಿಗಳಾದವರಿಗೆ ಶ್ರೇಷ್ಠವಾದ ಅರ್ಥಗಳು ಮನದಟ್ಟಾಗುತ್ತವೆ.
ಗಾದೆಗಳು ಸಾಮಾಜಿಕ ಮನುಷ್ಯನ ಎಲ್ಲಾ ಬಗೆಯ ವರ್ತನೆಗಳನ್ನು ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಲೋಪದೋಷಗಳನ್ನು ಅತ್ಯಂತ ಮಾರ್ಮಿಕ ವಾದ ರೀತಿಯಲ್ಲಿ ವಿಮರ್ಶೆ ಮಾಡಿವೆ. ಜೀವನದ ಕಟು ಸತ್ಯಗಳನ್ನು ಗಾದೆಗಳು ಸರಳವಾದ ಆದರೆ ಪರಿಣಾಮಕಾರಿಯಾದ ನುಡಿಗಟ್ಟುಗಳ ಮೂಲಕ ತಿಳಿಸುತ್ತವೆ. ಸಾಮಾನ್ಯವಾಗಿ ಗಾದೆಯ ವಾಕ್ಯಗಳು ಅತ್ಯಂತ ಸಂಕ್ಷಿಪ್ತವಾಗಿರುತ್ತವೆ. ಅರ್ಥಗಳ ಪರಂಪರೆಯನ್ನೇ ಒಳಗೊಂಡಿರುವ ಉಪಮೆ, ದೃಷ್ಟಾಂತ ಮತ್ತು ರೂಪಕಗಳನ್ನು ಗಾದೆಗಳಲ್ಲಿ ನಾವು ಕಾಣಬಹುದು. ಕೆಲವು ಗಾದೆಗಳು ಸಂಭಾಷಣೆಯ ಶೈಲಿಯಲ್ಲಿರುವುದು ಕಂಡುಬರುತ್ತದೆ.
1. ದೂರದ ಬೆಟ್ಟ ನುಣ್ಣಗೆ.
2. ಬೆಳ್ಳಗಿರುವುದೆಲ್ಲಾ ಹಾಲಲ್ಲ.
3. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.
4. ನಾಯಿ ಬಾಲಕ್ಕೆ ದಬ್ಬೆ ಕಟ್ಟಿದ ಹಾಗೆ.
5. ಉತ್ತರನ ಪೌರುಷ ಒಲೆ ಮುಂದೆ.
6. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ.
7. ಒಂದು ನಾಯಿಗೆ ಹಿಟ್ಹಾಕಿ. ಎರಡು ನಾಯಿ ‘ಚೂ’ ಬಿಟ್ಟಂತೆ.
8. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
9. ಊರು ಮುಂದಲ ಮಾರಿಗುಡೀಲಿ ಮಲಗಿದರೆ ಏಳ್ಸೋರು ಯಾರು ಅಂದ್ರೆ ನನ್ನೂರ ಕೋಳಿಹುಂಜ ಅಂದಂಗೆ.
10. ಎಷ್ಟು ಜನ ಮಕ್ಕಳು ನಿನಗೆ ಎಂದೊತ್ತಿಗೆ ಊರಲ್ಲಿರೋ ಬೊಡ್ಡೀವೆಲ್ಲಾ ನನ್ನವೆ, ಆದರೆ ಅಪ್ಪಾ ಅನ್ನೋ ಬೊಡ್ಡೀವು ಒಂದೂ ಇಲ್ಲ ಅಂದ್ನಂತೆ.
ಗಾದೆಯ ಮಾತುಗಳಿಗೆ ‘ನಾಣ್ಣುಡಿ’ ಎಂಬ ಮತ್ತೊಂದು ಹೆಸರಿದೆ. ಗಾದೆಗಳು ನಮ್ಮ ಬದುಕಿಗೆ ಅಗತ್ಯವಾದ ಎಲ್ಲಾ ಬಗೆಯ ಅರಿವು, ವಿವೇಕ ಮತ್ತು ಎಚ್ಚರಿಕೆಯನ್ನು ಬೋಧಿಸುವಂತಹ ಸಾಮರ್ಥ್ಯವನ್ನು ಹೊಂದಿವೆ.
ಶಾಪಗಳು
ಅನ್ಯರಿಗೆ ಹಾನಿಯುಂಟಾಗಲೆಂಬ ಆಶಯವನ್ನು ಹೊಂದಿರುವ ನುಡಿಗಳಿಗೆ ಶಾಪದ ನುಡಿಗಳೆಂದು ಹೆಸರು. ಶಾಪದ ನುಡಿಗಳನ್ನಾಡುವುದನ್ನು  “ಶಾಪ ಹಾಕುವುದು” ಎಂದು ಕರೆಯುತ್ತಾರೆ.
ತಮ್ಮ ಹಗೆಗಳಿಗೆ “ಸಾವು ಬರಲಿ; ಮನೆಯ ಆಸ್ತಿ-ಪಾಸ್ತಿಗಳು ನಾಶವಾಗಲಿ; ದೇಹದ ಅಂಗಾಂಗಗಳು ಊನಗೊಳ್ಳಲಿ ; ದಾರಿದ್ರ್ಯ ತಟ್ಟಲಿ; ರೋಗಗಳು ಬರಲಿ” ಎಂಬ ನಾನಾ ಬಗೆಯ ಕೇಡಿನ ಆಶಯಗಳನ್ನು ಹೊಂದಿರುವ ಶಾಪರೂಪದ ನುಡಿಗಳನ್ನು ಸಾಮಾಜಿಕ ವ್ಯಕ್ತಿಗಳು ಮಾತಿನ ಸಂದರ್ಭಗಳಲ್ಲಿ ಪ್ರಯೋಗಿಸುತ್ತಾರೆ. ಶಾಪದ ನುಡಿಗಳ ಭಾಷಿಕ ರೂಪಗಳು ಈ ಕೆಳಕಂಡಂತೆ ಇವೆ.
ನಿನ್ ಬಾಯ್ಗೆ ಮಣ್ಬೀಳ.
ನಿನ್ನನೆ ಪಾಳ್ಮನೆಯಾಗ.
ನಿನ್ ಕಣ್ ಇಂಗ್ಹೋಗ.
ನಿಂಗೆ ಮೊಲ್ಲಾಗ್ರು ಬರ.
ನಿನ್ ಕಂದನ್ ತಿನ್ನ.
ನಿನ್ ಕೈಗೆ ಬಂದದ್ದು, ಬಾಯ್ಗೆ ಬರ್ದೇ ಹೋಗ.
ನಿನ್ ಎಮ್ಮೇಗೆ ದೊಡ್ರೋಗ ಬರ.
ನಿನ್ ಹಣೆ ಮ್ಯಾಲೆ ಬಾಚಿಂಗ ಕಟ್ದೇ ಹೋಗ.
ನಿನ್ ದುವ್ವೆ ಮ್ಯಾಕೆ ಕಾಗೆ ಬರ್ದೇ ಹೋಗ.
ಶಾಪ ಹಾಕುವುದರ ಉದ್ದೇಶ ಅಥವಾ ನಿಯೋಗಗಳು
1. ಹಗೆಗಳಿಗೆ ಕೇಡನ್ನು ಹಾರೈಸುವುದು
2. ತಮಗುಂಟಾಗಿರುವ ಹತಾಶೆ ಅಥವಾ ದುಃಖದ ತೀವ್ರತೆಯನ್ನು ನಿವಾರಿಸಿಕೊಳ್ಳುವುದು.
ಮಾತಿನ ಸಂದರ್ಭ 1
ಒಬ್ಬ ಹೆಂಗಸು (ಸುಮಾರು 30 ವರ್ಷ) ಮತ್ತೊಬ್ಬ ಹೆಂಗಸಿಗೆ (ಸುಮಾರು 35 ವರ್ಷ) ಶಾಪ ಹಾಕುತ್ತಿರುವುದು.
ಹೆಂಗಸು : ನನ್ ಗಂಡನ ಮ್ಯಾಲೆ ಇಂಥಾ ಅನ್ನಾಯ ಆಡಿದ್ದೀಯಲ್ಲ!
ನಿಂಗೆ ಒಳ್ಳೇದಾದದೆ? ಥೂ ………… ನನ್ ಸವ್ತಿ …….
ಹಾದರ್ರ‍್ಗಿ‍ತ್ ನನ್ ಸವ್ತಿ ……….
ಯಾರ್ಮನೆ ಹಾಳ್ ಮಾಡೊಕೆ ಅಂತ ಹೇಳ್ದೆ …..
ನಿನ್ ಮಗನ್ನ ತಿನ್ನ …….. ನಿನ್ ಗೆಡ್ ತಿನ್ನ ……
ನಿನ್ ಹೆಣ್ ಮುಂಡೆಯಾಗ…………
ನಿಂಗೆ ಬರಬಾರದ್ದು ಬರ……………..
ನಿಂಗೆ ವಾಂತ್ಬೇದಿ ತಗಳ……….
ಶಾಪ ಹಾಕಲು ಕಾರಣ : ತನ್ನ ಗಂಡನ ನಡತೆಯ ಬಗ್ಗೆ ಆಕೆಯು ಅನ್ಯರ ಮುಂದೆ ಕೆಟ್ಟ ಮಾತುಗಳನ್ನು ಆಡಿದ್ದಳೆಂಬುದನ್ನು ತಿಳಿದು, ಈ ರೀತಿ ಶಪಿಸುತ್ತಿದ್ದಳು.
ಮಾತಿನ ಸಂದರ್ಭ 2
ಸುಮಾರು ನಲವತ್ತೈದು ವಯಸ್ಸಿನ ಹೆಂಗಸೊಬ್ಬಳು ಒಂದು ಮನೆಯ ಮುಂದೆ ನಿಂತು ಶಾಪ ಹಾಕುತ್ತಿರುವುದು.
ಹೆಂಗಸು : ನಿಮ್ಮನೆ ಎಕ್ಕುಟ್ಟೋಗ………
ನಮ್ಮ ಹೊಟ್ಟೆ ಉರಿಸ್ಕೊಂಡಂಗೆ, ನಿಮ್ಮನೆ ಉರ‌್ದು ಬೆಂದೋಗ.
(ಶಾಪದ ನುಡಿಗಳನ್ನಾಡುತ್ತಿದ್ದಂತೆಯೇ, ಬೀದಿಯ ಧೂಳನ್ನು ಕೈಗಳಿಂದ ಗೋರಿಕೊಂಡು, ಆ ಮನೆಯ ಮುಂದೆ ಎರಚುತ್ತಾ)
ನನ್ ಮಗಳು ಸತ್ಯವಂತೆಯೇ ಆಗಿದ್ರೆ…………
ನಿಮಗೆ ಬರಬಾರದ್ದು ಬರ…….
ನಿಮ್ ಮಕ್ಳು ಸಾಲ್ ಸಮಾಧಿ ಮಾಡ………….
(‘ಲಬೋ ಲಬೋ’ ಎಂದು ಬಾಯಿ ಬಡಿದುಕೊಳ್ಳುತ್ತಾ ಅಳುತ್ತಿರುತ್ತಾಳೆ)
ಶಾಪ ಹಾಕಲು ಕಾರಣ
ವರದಕ್ಷಿಣೆಯ ಕಾರಣಕ್ಕಾಗಿ ಗಂಡನ ಮನೆಯಲ್ಲಿ ಅಕಾಲ ಮರಣಕ್ಕೆ ತುತ್ತಾದ ತನ್ನ ಮಗಳ ಶವ ಸಂಸ್ಕಾರ ಮುಗಿದ ನಂತರ, ಹೆತ್ತ ತಾಯಿಯು ತನ್ನ ಹತಾಶ ಭಾವವನ್ನು ಮತ್ತು ದುಃಖವನ್ನು ವ್ಯಕ್ತಪಡಿಸುತ್ತಾ ಬೀಗರ ಮನೆಯವರನ್ನು ಶಪಿಸುತ್ತಿರುವುದು.
ಸಾಮಾಜಿಕ ಜೀವನದಲ್ಲಿ ತಮಗೆ ನಾನಾ ಬಗೆಯ ತೊಂದರೆಗಳನ್ನು ನೀಡಿದ ಅಥವಾ ಕೇಡುಗಳನ್ನು ಮಾಡಿದ ವ್ಯಕ್ತಿಗಳ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ, ಪ್ರತೀಕಾರವನ್ನು ತೀರಿಸಿಕೊಳ್ಳಲಾಗದೆ, ಶಾಬ್ದಿಕ ರೂಪದಲ್ಲಿ ಶಾಪ ಹಾಕುತ್ತಾ, ಕೇಡನ್ನು ಹಾರೈಸುತ್ತಾರೆ. ಸಾಮಾಜಿಕವಾಗಿ ಕೆಳವರ್ಗ ಮತ್ತು ಮಧ್ಯಮ ಕೆಳವರ್ಗದ ಹೆಂಗಸರು ಶಾಪದ ನುಡಿಗಳನ್ನು ಅಧಿಕವಾಗಿ ಬಳಸುತ್ತಾರೆ. ಗಂಡಸರ ಬಾಯಲ್ಲಿ ಬಹಳ ಅಪರೂಪಕ್ಕೆ ಶಾಪದ ನುಡಿಗಳು ಹೊರಬೀಳುತ್ತವೆ. ಶಾಪವನ್ನು ಹಾಕುವವರು ತಾವು ನಂಬಿರುವ ದೇವರಲ್ಲಿ ಅಥವಾ ಅಗೋಚರವಾದ ಶಕ್ತಿಯಲ್ಲಿ ಮೊರೆಯಿಡುತ್ತಾ, ಎತ್ತರದ ಧ್ವನಿಯಲ್ಲಿ ಲಯಬದ್ಧವಾಗಿ ಶಾಪಗಳನ್ನು ಉಚ್ಚರಿಸುತ್ತಾರೆ. ಕೆಲವೊಮ್ಮೆ ಶಾಪದ ನುಡಿಗಳ ಜೊತೆಗೆ ಹಗೆಗಳ ಮೈಮೇಲೆ ಉಗಿಯುವ ಅಥವಾ ಮನೆಯ ಮೇಲೆ ಧೂಳನ್ನು ಎರಚುವ ಕ್ರಿಯೆಯಲ್ಲಿ ತೊಡಗುತ್ತಾರೆ. ಉಗುಳು ಅಥವಾ ಧೂಳು ಶಾಪ ವಾಹಕಗಳಾಗಿ ತಮ್ಮ ಹಗೆಗಳಿಗೆ ಕೇಡನ್ನು ಮಾಡಲೆಂಬುದೇ ಈ ಕ್ರಿಯೆಯ ಉದ್ದೇಶವಾಗಿರುತ್ತದೆ.
ಶಾಪಗಳನ್ನು ಹಾಕುವ ಮತ್ತು ಹಾಕಿಸಿಕೊಳ್ಳುವುದರ ಬಗ್ಗೆ ನಮ್ಮ ಮಾತಿನ ಸಮುದಾಯದಲ್ಲಿ ನಾನಾ ಬಗೆಯ ನಂಬಿಕೆಗಳಿವೆ.
1. ಸರಿಯಾದ ಕಾರಣವಿಲ್ಲದೆ ಶಾಪ ಹಾಕಿದರೆ, ಆ ಶಾಪ ಹಾಕಿದ ವ್ಯಕ್ತಿಗೆ ಬಂದು ತಟ್ಟುತ್ತದೆ.
2. ಗುರು ಹಿರಿಯರು ಹಾಕಿದ ಶಾಪ, ಅದರಲ್ಲಿಯೂ ತಾಯಿ ತಂದೆಗಳು ಹಾಕಿದ ಶಾಪ ಖಂಡಿತ ಕೇಡನ್ನು ಮಾಡುತ್ತದೆ.
3. ಶಾಪ ಹಾಕಿಸಿಕೊಳ್ಳಲು ಎಂಥವರೂ ಬೆಚ್ಚುತ್ತಾರೆ. ಯಾಕೆಂದರೆ ಯಾವುದೋ ಕೆಟ್ಟ ಗಳಿಗೆಯಲ್ಲಿ ಹಗೆಗಳು ಹಾಕಿದ ಶಾಪ, ಜೀವನದ ಅವಧಿಯಲ್ಲಿ ಎಂದಾದರೊಮ್ಮೆ ನಿಜವಾಗಿ ತಟ್ಟಬಹುದೆಂಬ ಭೀತಿಯು ಸದಾಕಾಲ ಕಾಡುತ್ತಿರುತ್ತದೆ.
ಆಣೆ ಪ್ರಮಾಣಗಳು
ತಾವು ಆಡುತ್ತಿರುವ ಮಾತುಗಳು ಸತ್ಯವೆಂದು ಮತ್ತು ಕೇಳುತ್ತಿರುವವರು ತಮ್ಮ ಮಾತುಗಳನ್ನು ನಂಬಬೇಕೆಂದು ಒತ್ತಾಯ ಮಾಡುವಂಥ ಮಾತಿನ ಸಂದರ್ಭಗಳಲ್ಲಿ ಆಣೆಗಳನ್ನು ಇಡುತ್ತಾರೆ.
ತಮ್ಮ ಮೇಲೆ ಬಂದಿರುವ ಯಾವುದೇ ವಿಧವಾದ ಆಪಾದನೆಯನ್ನು ನಿರಾಕರಿಸುವಾಗ ‘ಒಂದು ವಸ್ತು ಅಥವಾ ಜೀವಿ’ಯನ್ನು ಮುಟ್ಟಿ ಮಾತನಾಡುವುದರ ಮೂಲಕ ಪ್ರಮಾಣವನ್ನು ಮಾಡುತ್ತಾರೆ. ಪ್ರಮಾಣವನ್ನು ಮಾಡುವಾಗ ಮಾತಿನ ಘಟನೆಯಲ್ಲಿ ನೇರವಾಗಿ ಭಾಗಿಗಳಾದ  ವ್ಯಕ್ತಿಗಳಲ್ಲದೆ, ಸಾಕ್ಷಿಗಳಾಗಿ ಇತರರು ಇರುವ ಸಂಭವವಿರುತ್ತದೆ. ಆಣೆಗಳನ್ನು ಇಡುವ ಪ್ರಸಂಗಗಳು ನಿತ್ಯ ಜೀವನದಲ್ಲಿ ಹೇರಳವಾಗಿ ಕಂಡುಬಂದರೆ, ಪ್ರಮಾಣವನ್ನು ಮಾಡುವ ಪ್ರಸಂಗಗಳು ಬಹು ವಿರಳವಾಗಿ ಕಂಡುಬರುತ್ತವೆ. ಮಾತಿನ ಸಂದರ್ಭಗಳಲ್ಲಿ ಆಪಾದನೆಗೆ ಗುರಿಯಾದ ವ್ಯಕ್ತಿ ತನ್ನ ಮೇಲಿನ ಆಪಾದನೆ ಯನ್ನು ನಿರಾಕರಿಸತೊಡಗಿದಾಗ, ಅಂತಿಮ ಘಟ್ಟದಲ್ಲಿ ಪ್ರಮಾಣ ಮಾಡಿಸುವ ಆಚರಣೆಯು ನಡೆಯುತ್ತದೆ.
ಉದಾಹರಣೆ: ಮನೆಯಲ್ಲಿ ಮೇಜಿನ ಮೇಲೆ ಇಟ್ಟಿದ್ದ ಇನ್ನೂರು ರೂ.ಗಳು ಕಾಣೆಯಾದುದುರ ಬಗ್ಗೆ ಹದಿನೆಂಟರ ವಯಸ್ಸಿನ ಆಳನ್ನು ಮನೆಯ ಯಜಮಾನ (ಸುಮಾರು 50 ವಯಸ್ಸು) ಮತ್ತು ಯಜಮಾನಿ (ಸುಮಾರು 40 ವಯಸ್ಸು) ಪ್ರಶ್ನಿಸುತ್ತಿರುವ ಮಾತಿನ ಸಂದರ್ಭ.
ಯಜಮಾನ : ಲೇ ನಿಜ ಬೊಗಳು. ತಗೊಂಡಿದ್ರೆ ಕೊಟ್ಬುಡು
ಆಳು : ನನ್ ತಾಯಾಣೆಗೂ ತಕೊಂಡಿಲ್ಲ ಕಣ್ರಪ್ಪ ದೇವರಾಣೆಗೂ ನಾ ಕಾಣೆ. ಅದೆಲ್ಲಿತ್ತೊ ನಂಗೊತ್ತಿಲ್ಲ.
ಯಜಮಾನಿ : ನಿಂಗೆ ಗೊತ್ತಿಲ್ದೆ ಏನ್ಲ? ನೀನೊಬ್ನೆ ಅಲ್ವೆ ಮನೇಲಿ ದ್ದೋನು? ಇನ್ಯಾರು ಬಂದಿದ್ರು ಒಳಕ್ಕೆ?
ಆಳು : ಇದೇನ್ರವ್ವ ಹಿಂಗಂತೀರಿ? ಯಾವತ್ತಾದ್ರು ನಾನು ಹಂಗೆ ಮಾಡಿದ್ನ? ನನ್ ಕಣ್ಣಾಣೆಗೂ ಇಲ್ಲ ಕಣ್ರವ್ವ. ಈ ಭೂಮ್ತಾಯಿ ಆಣೆಗೂ ನಾ ದುಡ್ಡ ಕಾಣೆ ಕಾಣ್ರವ್ವ.
ಯಜಮಾನ : ಲೇ, ನೀ ಆಣೆ – ಗೀಣೆ ಇಕ್ಬೇಡ. ನಿಜ ಹೇಳು ಎಲ್ಲಿಟ್ಟಿದ್ದೀಯೆ?
(ಹೊಡೆಯಲೆಂದು ಕೈಯೆತ್ತಿ ಮುನ್ನುಗ್ಗುತ್ತಾನೆ)
ಯಜಮಾನಿ : (ಅಡ್ಡ ಬಂದು ತಡೆಯುತ್ತಾ)
ಹೊಡಿಗಿಡಿ ಬ್ಯಾಡಿ. ಎಲ್ಲಾದ್ರು ಆಸವಲ್ಲದ ಜಾಗಕ್ಕೆ ಏಟು ಬಿದ್ದು, ಇನ್ನೇನಾದ್ರೂ ಆದದು! ಸುಮ್ನೆ ಮಾತಲ್ಲೆ ಕೇಳಿ.
ಆಳು : ನಿಜವಾಗ್ಲೂ ನಾ ಎತ್ಕೊಂಡಿಲ್ಲ ಕಣ್ರಪ್ಪ. ಯಾವ ದೇವರ ಮುಂದೇನಾದ್ರು ಪ್ರಮಾಣ ಮಾಡ್ತೀನಿ. ಆ ಪಟಲದವ್ವನಾಣೆಗೂ ನಾ ಕಳ್ಳ ಅಲ್ಲ ಕಣ್ರಪ್ಪ.
ಯಜಮಾನಿ : ಹಂಗಾದ್ರೆ ಪಟಲದವ್ವನ ಗುಡಿ ಮುಂದೆ ನಿಂತ್ಕೊಂಡು ಪ್ರಮಾಣ ಮಾಡೀಯ?
ಆಳು : ಆಗ್ಲಿ ಕಣ್ರವ್ವ. ಈಗ್ಲೆ ನಡೀರಿ ಬೇಕಾದ್ರೆ.
ಯಜಮಾನ : ಪಟಲದವ್ವನ ಗುಡೀನು ಬೇಡ, ಏನು ಬೇಡ ಇಲ್ಲೆ ನಮ್ಮ ಕೊಟ್ಗೇಲಿ ಬಸವಣ್ ದೇವರ ಬಾಲ ಹಿಡ್ಕೊಡು ಪ್ರಮಾಣ ಮಾಡ್ನಡಿ.
ಆಳು : ಹಂಗೆ ಆಗ್ಲಿ ಕಣ್ರಪ್ಪ, ನಡೀರಿ.
(ಕೊಟ್ಟಿಗೆಗೆ ಬಂದು ಹಸುವಿನ ಬಾಲವನ್ನು ಹಿಡಿದುಕೊಂಡು)
ಈ ಬಸವಣ್ಣಾಣೆಗೂ ನಾನು ಅಲ್ಲಿದ್ದ ದುಡ್ಡ ತಕೊಂಡಿಲ್ಲ. ನಾನು ಆ ದುಡ್ಡ ಕಾಣೂಕೆ ಕಾಣೆ. ನಾನೇನಾದ್ರು ಎತ್ಕೊಂಡು ಸುಳ್ಳು ಹೇಳ್ತಿದ್ರೆ ……….. ನನ್ ಕಣ್ ಹಿಂಗೋಗ್ಲಿ …… ನನ್ ಕೈ ಸೇದೋಗ್ಲಿ……….. ನಂಗೆ ಬರಬಾರದ್ದು ಬರ್ಲಿ.
ತಮಗೆ ಆತ್ಮೀಯರಾದ ತಾಯಿ ತಂದೆ ಮಕ್ಕಳ ಹೆಸರಿನಲ್ಲಿ; ತಮ್ಮ ಮನೆ ದೇವರ ಅಥವಾ ತಮ್ಮ ಪರಿಸರದಲ್ಲಿ ಪ್ರಸಿದ್ಧರಾಗಿರುವ ದೇವರ ಹೆಸರಿನಲ್ಲಿ; ಪವಿತ್ರವೆಂದು ತಾವು ನಂಬಿರುವ ವಸ್ತುಗಳ ಹೆಸರಿನಲ್ಲಿ; ತಮಗೆ ಪ್ರೀತಿ ಪಾತ್ರವಾದ ಪ್ರಾಣಿ ಪಕ್ಷಿಗಳ ಹೆಸರಿನಲ್ಲಿ; ತಮ್ಮ ನಡೆನುಡಿಗಳ ಹೆಸರಿನಲ್ಲಿ ಆಣೆ ಪ್ರಮಾಣಗಳನ್ನು ಮಾಡುತ್ತಾರೆ. ಆಣೆ ಪ್ರಮಾಣಗಳ ಪ್ರಮುಖ ಉದ್ದೇಶ ಅಥವಾ ನಿಯೋಗವೆಂದರೆ ತಮ್ಮನ್ನು ತಾವು ಉತ್ತಮರೆಂದು ಸಮರ್ಥಿಸಿ ಕೊಳ್ಳುವುದು.
ಆಣೆ ಪ್ರಮಾಣಗಳನ್ನು ನಿತ್ಯಜೀವನದ ಮಾತುಕತೆಗಳಲ್ಲಿ ಅತ್ಯಧಿಕವಾಗಿ ಮಾಡುವವರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾಗಿರುತ್ತಾರೆ. ಗಂಡಸರಿಗಿಂತ ಹೆಂಗಸರು ನಾಗರಿಕರಿಗಿಂತ ಗ್ರಾಮೀಣರು ಮತ್ತು ದೈಹಿಕವಾಗಿ ಸಬಲರಿಗಿಂತ ದುರ್ಬಲವಾಗಿರುವವರು ಅಧಿಕವಾಗಿ ಆಣೆ ಪ್ರಮಾಣಗಳನ್ನು ಮಾಡುತ್ತಾರೆ.
ಮಾತಿಗೆ ಮುಂಚೆ ಆಣೆ-ಪ್ರಮಾಣ ಮಾಡುವವರನ್ನು ನಂಬಬಾರದು ಎಂಬ ಭಾವನೆ ನಮ್ಮ ಮಾತಿನ ಸಮುದಾಯದಲ್ಲಿದೆ. ಮನೆಯ ಒಳಗೆ ಆಣೆ ಪ್ರಮಾಣ ಮಾಡುವುದು ಒಳ್ಳೆಯದಲ್ಲವೆಂದು, ಅಂಥಾ ಮನೆಗಳು ಬೇಗ ಹಾಳಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ. ಮಾತಿನ ಸಂದರ್ಭಗಳಲ್ಲಿ ಪ್ರಯೋಗಗೊಳ್ಳುವ ಆಣೆ ಪ್ರಮಾಣಗಳ ಭಾಷಿಕ ರೂಪಗಳು ಈ ಕೆಳ ಕಂಡಂತೆ ಇವೆ.
ನನ್ ಮಕ್ಕಳಾಣೆಗೂ………..
ನನ್ ತಿನ್ಕೊಂಡಾಣೆಗೂ……..
ನನ್ನಾಣೆಗೂ………..
ನಿನ್ನಾಣೆಗೂ………..
ದೇವರಾಣೆಗೂ…………
ಸರಸ್ವತಿ ಆಣೆಗೂ…………
ಧರ್ಮದೇವತೆ ಆಣೆಗೂ……….
ಈ ಮೇಲ್ಕಂಡ ಆಣೆಗಳನ್ನು ಹೇಳಿ, ಅದರ ಮುಂದೆ ತಾವು ಕೆಟ್ಟವರಲ್ಲ ಅಥವಾ ಕೆಟ್ಟ ಕೆಲಸವನ್ನು ಮಾಡಿಲ್ಲವೆಂದು ಹೇಳುತ್ತಾರೆ. ಬಹು ವಿರಳ ಸಂದರ್ಭಗಳಲ್ಲಿ ತಾವು ಖಂಡಿತವಾಗಿಯೂ ಉದ್ದೇಶಿತ ಕೆಲಸವನ್ನು ಮಾಡುವ ಭರವಸೆಯನ್ನು ನೀಡುವಾಗ
“ನಮ್ಮ ತಾಯಾಣೆಗೂ ಮಾಡ್ತೀನಿ. ದೇವರಾಣೆಗೂ ಕೊಡ್ತೀನಿ. ನನ್ನಾಣೆಗೂ ಬರ‌್ತೀನಿ” ಎಂದು ಆಣೆಗಳನ್ನು ಇಡುತ್ತಾರೆ. ನಾಗರಿಕ ಸಮಾಜ ದಲ್ಲಿನ ಹದಿ ಹರೆಯದ ಮಕ್ಕಳು ತಮ್ಮ ನಿತ್ಯ ಸಂಭಾಷಣೆಯಲ್ಲಿ “ಗಾಡ್ ಪ್ರಾಮಿಸ್………. ಮದರ್ ಪ್ರಾಮಿಸ್” ಎಂಬ ಆಣೆಗಳನ್ನು ಇಡುತ್ತಾರೆ.
ಪ್ರಮಾಣಗಳನ್ನು ಮಾಡುವಾಗ ಕ್ರಮಬದ್ಧವಾದ ಒಂದು ಆಚರಣೆಯೇ ನಮ್ಮ ಸಮಾಜದಲ್ಲಿ ಕಂಡುಬರುತ್ತದೆ. ತಮ್ಮ ಮಕ್ಕಳ ತಲೆಯ ಮೇಲೆ ಕೈಯಿಟ್ಟು ಅಥವಾ ಉಪ್ಪಿನ ಗುಡ್ಡೆಯ ಮೇಲೆ ನಿಂತು ಪ್ರಮಾಣ ಮಾಡುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಹಾಲನ್ನು, ಭೂಮಿಯನ್ನು ಅಥವಾ ಮಣ್ಣನ್ನು, ದನದ ಬಾಲವನ್ನು, ದೇವರ ಪಟವನ್ನು, ನೀರನ್ನು, ಪುಸ್ತಕವನ್ನು, ತಮ್ಮ ಕಣ್ಣುಗಳನ್ನು, ದೇಗುಲದ ಹೊಸ್ತಿಲನ್ನು ತಮ್ಮೆರಡು ಕೈಗಳಿಂದ ಮುಟ್ಟಿ ಇವುಗಳ ಮೇಲೆ ಆಣೆಯಿಟ್ಟು ಅಥವಾ ಇವುಗಳ ಸಾಕ್ಷಿಯಾಗಿ ತಾವು ಕೆಟ್ಟ ಕಾರ್ಯ ಮಾಡಿಲ್ಲವೆಂದು ಪ್ರಮಾಣ ಮಾಡುತ್ತಾರೆ. ಒಂದು ವೇಳೆ ಕೆಟ್ಟದ್ದನ್ನು ಮಾಡಿ ಅಥವಾ ಆಡಿ, ಈಗ ಸುಳ್ಳಾಡುತ್ತಿದ್ದರೆ, ತಮಗೆ ತೀವ್ರತರವಾದ ದುಃಖ ದುರಂತಗಳು ಬರಲೆಂದು, ತಮ್ಮನ್ನು ತಾವೇ  ಶಪಿಸಿಕೊಳ್ಳುತ್ತಾರೆ.
  • blogger
  • delicious
  • digg
  • facebook
  • reddit
  • stumble
  • twitter
  • print
  • email
ಪುಸ್ತಕ: 
ಲೇಖಕರು: 
ಪ್ರಕಾಶಕರು: 
ಮುಖ್ಯ ಸಂಪಾದಕರು: 

ಸೋಮವಾರ, ಸೆಪ್ಟೆಂಬರ್ 9, 2013

ಮಾತಿಲ್ಲ...ಕತೆಯಿಲ್ಲ

ಸಿ.ಪಿ.ನಾಗರಾಜ ಬರೆದ ಮೂರು ಮಾಡರ್ನ್ ಕಥಾಪ್ರಸಂಗಗಳು    
ಸಿ.ಪಿ.ನಾಗರಾಜ
ಮಂಗಳವಾರ, 13 ಆಗಸ್ಟ್ 2013 (08:21 IST) 
ಕಳೆದ  ಹಲವಾರು  ವರುಶಗಳಲ್ಲಿ   ನಡೆದ   ಮೂರು   ಪ್ರಸಂಗಗಳನ್ನು   ಇಲ್ಲಿ   ಹೇಳುತ್ತಿದ್ದೇನೆ .
ಪ್ರಸಂಗ-೧
ಒಂದು  ದಿನ  ಬೆಳ್ಳಂಬೆಳಗ್ಗೆ   ಕಾಳಮುದ್ದನ ದೊಡ್ಡಿಯಿಂದ    ಮಂಡ್ಯಕ್ಕೆ   ಹೋಗಲೆಂದು  ಬಸ್ಸುಗಳು   ನಿಲ್ಲುವ   ಜಾಗದ   ರಸ್ತೆ   ಬದಿಗೆ   ಬಂದು   ನಿಂತೆನು . ದೊಡ್ಡದಾಗಿದ್ದ   ಆ   ಜಾಗದಲ್ಲಿ   ನಾಲ್ಕೈದು   ಗೂಡೆಗಳನ್ನು  ಇಟ್ಟುಕೊಂಡು  ಒಬ್ಬ  ರೈತ   ಕುಳಿತಿದ್ದ .  ಅವನ   ಬಳಿಗೆ   ಬಂದ   ವ್ಯಾಪಾರಿಯೊಬ್ಬ   ಅವನನ್ನು   ಕುರಿತು -
" ಯಾವೂರಯ್ಯ  ? " ಎಂದ .
" ಕಳ್ಳಿಮೆಳೆದೊಡ್ಡಿ    ಕಣ್    ಬಾಪ್ಪ . "
" ಟೆಂಬಟೆ  ಇಲ್ಲೇ   ಮಾರ್ತಿಯೋ .......  ಇಲ್ಲ   ಮಂಡ್ಯದ   ಮಾರ್ಕೆಟ್ಟಿಗೋ ? "
" ಸರಿಯಾದ   ರೇಟ್  ಬಂದ್ರೆ   ಇಲ್ಲೇ   ಕೊಡ್ತೀನಿ ....... ಇಲ್ದೇದ್ರೆ   ಮಂಡ್ಯಕ್ಕೆ   ಹೊಯ್ತಿನಿ . "
" ಹಂಗಾದ್ರೆ   ಅದೇನ್  ಒಂದ್  ರೇಟ್   ಹೇಳು  ಮಂತೆ  ."
ರೈತನು  ತಾನು   ಬೆಳೆದ  ಟೊಮೊಟೊ   ಹಣ್ಣನ್ನು   ಮಾರಲೆಂದು    ಹಳ್ಳಿಯಿಂದ   ಬಂದಿದ್ದ .  ಈಗ  ತನ್ನ   ಗೂಡೆಗಳ   ಕಡೆಗೆ   ಮತ್ತೊಮ್ಮೆ   ನೋಡಿ-
" ಹಣ್ಣು  ತುಂಬಾ  ಚೆಂದಾಗವೆ .  ಒಂದ್ಸತಿ   ನೀನು   ನೋಡು . ಆಮ್ಯಾಲೆ   ರೇಟ್   ಹೇಳ್ತಿನಿ  ."
" ನೋಡೋದೇನ  ..... ಮ್ಯಾಲೆಯೇ   ಕಾಣ್ತಾವಲ್ಲ . ಹೇಳು  ಒಂದು  ರೇಟ್ನ  "
" ನಿಂಗೆ  ಎಷ್ಟು  ಗೂಡೆ  ಬೇಕು ."
" ಎಲ್ಲಾನು   ಸೇರ್ಸೆ   ರೇಟ್   ಹೇಳಯ್ಯ ."
ಈಗ  ರೈತ  ಒಂದೆರಡು  ಗಳಿಗೆ   ಮನದಲ್ಲಿಯೇ   ಅಳೆದು   ತೂಗಿ   ಒಂದು   ಮೊತ್ತವನ್ನು   ಹೇಳಿದ . ಇದನ್ನು   ಕೇಳುತ್ತಿದ್ದಂತೆಯೇ   ವ್ಯಾಪಾರಿಯು -
" ಓಹೊಹೋ...... ಏನು   ತೆಂಗಿನ ಮರದ  ಮ್ಯಾಲೆ   ಕುಂತಿದ್ದಿಯೇ ? "
" ನಾನೆಲ್ಲಾದ್ರೂ   ಕುಂತಿರ್ಲಿ..... ನೀನೊಂದು   ರೇಟ್   ಕೇಳೋ   ಮಾರಾಯ ."
" ಏ....ನಿನ್   ಜೊತೇಲಿ   ಯಾಪಾರ   ಮಾಡೋಕಾಗೋದಿಲ್ಲ  ಬುಡಪ್ಪ . ರೇಟ್   ಹೇಳಿ   ಏನು   ಪ್ರಯೋಜನ ?"
" ಇಲ್ಲ  ಕಣ್  ಕೇಳಯ್ಯ . ಕೇಳೂಕೇನ್  ಕಷ್ಟ . ನಾನೇನು  ನೀ  ಕೇಳ್ದಷ್ಟಕ್ಕೆ   ಕೊಟ್ಬುಟ್ಟನೆ ? "
ಈಗ  ವ್ಯಾಪಾರಿಯು  ಹಣ್ಣಿನ  ಗೂಡೆಗಳ  ಹತ್ತಿರ  ಬಂದು , ಒಂದೆರಡು  ಹಣ್ಣನ್ನು  ಮತ್ತೊಮ್ಮೆ  ನೋಡಿ ,  ಒಂದು  ಮೊತ್ತವನ್ನು  ಹೇಳಿದ . ಕೂಡಲೇ  ರೈತ -
" ನೀನು  ಐನಾತಿ   ಕುಳವೇ  ಬುಡು . "
" ಯಾಕಯ್ಯ ? "
" ಇನ್ನೇನ್   ಮಂತೆ ,  ನೀನು   ತೆಂಗಿನ   ಬುಡುತ್ತಾವು  ಕುಳೀತಿದ್ದೀಯಲ್ಲ ! "
ಈಗ  ಅವರಿಬ್ಬರ  ಚೌಕಾಸಿ  ವ್ಯಾಪಾರಕ್ಕೆ  ತೆಂಗಿನ  ಮರದ  ಬುಡ  ಮತ್ತು  ತುದಿಗಳು  ಎರಡು  ನೆಲೆಗಳಾಗಿದ್ದವು .  ವ್ಯಾಪಾರದ  ಮಾತು   ಮುಂದುವರಿದಂತೆಲ್ಲಾ   ನಡುನಡುವೆ , ಅವರಿಬ್ಬರೂ  ಒಂದೊಂದು  ಮೊತ್ತವನ್ನು  ಹೇಳುತ್ತಿದ್ದರು .  ಮೊತ್ತವನ್ನು  ಸೂಚಿಸುತ್ತಿದ್ದಂತೆಯೇ  - " ನೀನೊಸಿ  ಮ್ಯಾಕ್  ಬಾ " " ನೀನೊಸಿ  ಇಳಿದು  ಬಾ  ಕೆಳಕ್ಕೆ " - ಎಂಬ  ಮಾತುಗಳು  ತೂರಿಬರುತ್ತಿದ್ದವು . ಕಟ್ಟಕಡೆಗೆ  ರೈತನು -
" ಇನ್ನೆಷ್ಟು  ಅಂತ  ಇಳಿಯನಯ್ಯ ?  ಇನ್ನೂ  ಕಮ್ಮಿಯಾಗಿ  ಕೊಟ್ರೆ  ಏನ್  ತಾನೇ  ಸಿಕ್ಕದು  ನಂಗೆ ? ನಮ್ಮ  ರೈತರ  ನೋವು  ನಿಂಗೆ  ಹೆಂಗಪ್ಪ  ಗೊತ್ತಾದದು ? ಈ  ಬ್ಯಾಸ್ಗೇಲಿ  ಟೆಂಬಟೆ  ಬೆಳೀಬೇಕಾದ್ರೆ  ಎಷ್ಟು  ಕಷ್ಟ  ಗೊತ್ತೆ ? ಹಾಳಾದ್  ಕರೆಂಟ್  ಬ್ಯಾರೆ  ಸರಿಯಾದ  ಟೇಮಲ್ಲಿ  ಕೈಕೊಡ್ತದೆ......ಬರಬಾರದ್ದು  ರೋಗ  ಹಣ್ಣಿಗೆ  ಬತ್ತದೆ . ಅಂತಾದ್ದರಲ್ಲಿ  ಇಷ್ಟು  ಕಮ್ಮಿಯಾಗಿ  ಕೇಳ್ತಾಯಿದ್ದೀಯಲ್ಲ  ನ್ಯಾಯವೇನಯ್ಯ ? "
" ನಾನೇನು  ನಿನ್ನ  ಹಣ್  ತಕೊಂಡು  ಕುಬೇರ  ಆಗ್ಬುಟ್ಟನೆ !  ನಾನು  ತಳ್ಳುಗಾಡಿ   ಮ್ಯಾಲೆ  ತರಕಾರಿ  ಇಟ್ಕೊಂಡು  ಬಿಸ್ಲು  ಮಳೆ  ಅನ್ನದೇ  ಸಂಜೆ  ತಂಕ  ಊರೆಲ್ಲಾ  ತಿರುಗುದ್ರೆ  ತಾನೇ..... ನಂಗೂ  ಜೀವನ  ಮಾಡೋಕೆ  ಮೂರ್ಕಾಸು  ಸಿಗೂದು . "
" ಓ , ಏನೋ   ಒಬ್ಬೊಬ್ಬರದೂ  ಒಂದೊಂದು  ಹೊಡ್ಬಾಳು  ಬುಡಪ್ಪ " ಎಂದು  ನಿಟ್ಟುಸಿರು  ಬಿಡುತ್ತ  ,  ರೈತನು  ಈಗ  ಒಂದು  ಮೊತ್ತವನ್ನು  ಹೇಳಿದ . ಮತ್ತೆ  ಒಂದೆರಡು  ಬಾರಿ  ಚೌಕಾಸಿ  ನಡೆದು ,  ವ್ಯಾಪಾರಿಯು  ರೈತನಿಂದ  ಹಣ್ಣನ್ನು  ಕೊಂಡುಕೊಂಡನು .
ಪ್ರಸಂಗ-೨
ಒಂದು  ದಿನ  ಸಂಜೆ  ವೇಳೆ  ನನ್ನ  ಹೆಂಡತಿ  ಮತ್ತು  ಮಗನೊಡನೆ  ಕಾಳಮುದ್ದನದೊಡ್ಡಿಯ  ಪೇಟೆ  ಬೀದಿಗೆ  ಹೋದೆನು . ಬೀದಿ  ಬದಿಯಲ್ಲಿ  ಅನೇಕ  ಹೆಂಗಸರು  ಹಣ್ಣು-ತರಕಾರಿ  ಇಟ್ಟುಕೊಂಡು  ಮಾರಾಟ  ಮಾಡುತ್ತಿದ್ದರು .  ಅಲ್ಲಿ  ಒಂದೆಡೆಯಲ್ಲಿ  ನಿಂತುಕೊಂಡು  ನನ್ನ  ಹೆಂಡತಿ  ಒಂದು  ಪರಂಗಿ  ಹಣ್ಣನ್ನು  ತೋರಿಸುತ್ತಾ , ಅದರ  ರೇಟನ್ನು  ಕೇಳಿದಳು .
" ಎರಡು  ರೂಪಾಯಿ  ಆಯ್ತದೆ  ಕಣವ್ವ . "
" ಏನಮ್ಮ , ಇಷ್ಟು  ಸಣ್ಣದ್ದಕ್ಕೆ  ಎರಡು  ರೂಪಾಯೇ ? "
" ನಿಮಗೆ  ನಾನು  ಹೇಳಿರೂದು  ಕಮ್ಮಿ  ರೇಟು . ಇಂತದ  ಬ್ಯಾರೆ  ಕಡೆ  ನಾಲ್ಕು  ರೂಪಾಯಿಲ್ದೇ   ಕೊಡೂದಿಲ್ಲ . "
ನನ್ನ  ಹೆಂಡತಿ  ಮತ್ತು   ತರಕಾರಿ  ಅಮ್ಮನ  ನಡುವೆ  ಚೌಕಾಸಿ  ವ್ಯಾಪಾರ  ಮುಂದುವರಿಯುತ್ತಿದ್ದಾಗ  ,ಐದು  ವರುಷದ  ನನ್ನ  ಮಗ  ಅಲ್ಲಿ  ಜೋಡಿಸಿಟ್ಟಿದ್ದ   ಒಂದೆರಡು  ಹಣ್ಣುಗಳನ್ನು  ಕೈಯಿಂದ  ಮುಟ್ಟಿ  ಅಲ್ಲಾಡಿಸಿದ . ಇದನ್ನು  ಕಂಡ  ತರಕಾರಿ  ಅಮ್ಮನು -
" ಹಂಗೆಲ್ಲಾ  ಹಿಸುಕಬ್ಯಾಡ....ಹಣ್ಣು  ಹಾಳಾಗೊಯ್ತವೆ " ಎಂದು  ಗದರಿಸಿದಳು  . ನನ್ನ  ಹೆಂಡತಿಯು  ಮಗನನ್ನು  ಹಿಂದಕ್ಕೆ  ಎಳೆದುಕೊಳ್ಳುತ್ತಾ-
" ಏ.... ಹಂಗೆಲ್ಲಾ  ಮುಟ್ಟಬಾರದು . ಇತ್ತಗೆ  ಹಿಂದಕ್ಕೆ  ಬಾರೋ  ಚಿನ್ನ " ಎಂದಳು . ಕೂಡಲೇ  ತರಕಾರಿ  ಅಮ್ಮನು -  
" ಗಂಡಹೆಂಡ್ತಿ  ಇಬ್ಬರೂ  ಕೈತುಂಬಾ  ಸಂಬಳ  ಎಣಿಸ್ಕೊತೀರಿ . ಮಕ್ಕಳಿಗೆ  ಚಿನ್ನ  ಅಂತ್ಲು   ಹೆಸರಿಡ್ತೀರಿ.... ಬೆಳ್ಳಿ  ಅಂತಾನು  ಕರಿತೀರಿ ! " ಎಂದು  ಉದ್ಗಾರವೆಳೆದಳು . ಆಗ  ನಾನು  ನಗುತ್ತಾ-
"   ಇಬ್ಬರೂ  ಕೆಲಸದಲ್ಲಿ  ಇಲ್ಲ  ಕಣಮ್ಮ . ನನಗೊಬ್ಬನಿಗೆ  ಸಂಬಳ  ಬರೋದು . ನಮ್ಮ  ಮಗನ  ಹೆಸರು  ’ ಚಿನ್ಮಯ ’ ಅಂತ  ಕಣಮ್ಮ . ಚಿಕ್ಕದಾಗಿ ’ ಚಿನ್ನ ’ ಎಂತ  ಕರೀತಿವಿ . ನಮ್ಮ  ಹತ್ತಿರ  ನೀವು  ಹೇಳೂವಂಗೆ  ಯಾವ  ಸಂಪತ್ತು  ಇಲ್ಲ  ಕಣಮ್ಮ . "
ಈಗ  ನನ್ನ  ಹೆಂಡತಿ  ಮತ್ತೆ  ಕೇಳಿದಳು-
" ಎಷ್ಟಕ್ಕೆ  ಕೊಡ್ತಿಯೇ  ಹೇಳಮ್ಮ ."
" ಎಂಟಾಣೆ  ಕಮ್ಮಿ  ಕೊಡವ್ವ . ಅದಕ್ಕಿಂತ  ಕಮ್ಮಿಗೆ  ಕೇಳ್ಬೇಡ . ನಾವೂ  ಬೆಳಗ್ಗೆಯಿಂದ  ರಾತ್ರಿ  ತಂಕ  ತಲೆ  ಮ್ಯಾಲೆ  ಒಂದು  ನೆಳ್ಳು  ಇಲ್ದೇ  ಯಾಪಾರ  ಮಾಡ್ತೀವಿ  ಕಣವ್ವ . ನಮ್ಮ  ಕಷ್ಟ  ಕೇಳೋರು  ಯಾರಿದ್ದರು ? " ಎಂದು  ತನ್ನ  ಪಾಡನ್ನು  ಹೇಳಿಕೊಂಡಳು . ಈಗ  ನನ್ನ  ಹೆಂಡತಿಯು   ಮತ್ತೆ  ಚೌಕಾಸಿಗೆ  ಹೋಗದೆ , ದುಡ್ಡನ್ನು  ಕೊಟ್ಟಾಗ , ಹಣ್ಣನ್ನು  ಕೈಗೆ  ಇಡುತ್ತಾ , ತರಕಾರಿ  ಅಮ್ಮ  ಕೇಳಿದಳು-
" ಮಕ್ಕಳು  ಎಷ್ಟು  ಜನ ? "
" ಇಬ್ಬರು "
" ಇನ್ನೊಂದು  ಗಂಡೋ  ಹೆಣ್ಣೋ ? "
ಅಷ್ಟರಲ್ಲಿ  ಅವರಿಬ್ಬರ  ಮಾತಿನ  ನಡುವೆ  ನಾನು  ತಲೆಹಾಕಿ -
" ಹೆಣ್ಣು  ಕಣಮ್ಮ . ಗೌತಮಿ  ಅಂತ  ಹೆಸರಿಟ್ಟಿದ್ದೀವಿ . ರತ್ನ....ವಜ್ರ   ಅಂತ  ಇಟ್ಟಿಲ್ಲ " ಎಂದಾಗ  , ಆಕೆಯು  ನಮ್ಮೊಡನೆ  ಬಾಯ್ತುಂಬ  ನಕ್ಕಳು .
 ಪ್ರಸಂಗ-೩
ಕಳೆದ  ಆರೇಳು  ವರ್ಷಗಳಿಂದ   ಬೆಂಗಳೂರಿನಲ್ಲಿ  ನೆಲೆಸಿದ್ದೇನೆ . ಇಲ್ಲಿಗೆ  ಬಂದ  ಮೇಲೆ  ದೊಡ್ಡ  ದೊಡ್ಡ  ಮಾಲ್ ಗಳಿಗೆ  ಹೋಗಿಬರುವುದು  ರೂಢಿಯಾಗಿದೆ. ಏನಾದರೂ  ತರಲೆಂದು  ಅಲ್ಲಿಗೆ  ಹೋದಾಗ , ಕಣ್ಣು  ಕೊರೈಸುವಂತಹ  ಅಲ್ಲಿನ  ವಾತಾವರಣದಲ್ಲಿ  ಒಂದೆರಡು  ಸುತ್ತು  ತಿರುಗಿ ,  ಒಂದೆಡೆ  ನಾನು  ಕುಳಿತುಕೊಳ್ಳುತ್ತೇನೆ . ನನ್ನ  ಹೆಂಡತಿಯು  ಅಲ್ಲಿರುವ  ವಸ್ತುಗಳ  ಮೇಲೆ  ಬರೆದಿರುವ  ರೇಟುಗಳನ್ನು  ಪರಿಶೀಲಿಸುತ್ತಾ , ಮನೆಗೆ  ಬೇಕಾದ  ಸಾಮಾನುಗಳನ್ನು  ಎತ್ತಿಕೊಂಡು  , ಕವರುಗಳಿಗೆ  ಹಾಕಿಕೊಂಡು , ತಳ್ಳುವ  ಗಾಡಿಯಲ್ಲಿ  ತುಂಬಿಕೊಂಡು  , ಬಿಲ್  ಹಾಕುವವರ  ಬಳಿಗೆ  ಬಂದು , ಹಣ ಕೊಟ್ಟು  ಹೊರಬರುತ್ತಾಳೆ . ಎಲ್ಲಿಯೂ  ಒಂದು  ಮಾತಿಲ್ಲ.... ನೋವುನಲಿವಿನ  ಮಾತುಕತೆಯಿಲ್ಲ ... ಯಾವುದೇ  ಚೌಕಾಸಿಯಿಲ್ಲ .... ಜೀವಭಾವಗಳಿಲ್ಲದ  ರೊಬಾಟ್ ಗಳಂತೆ  ಕೈಕಾಲು  ಅಲ್ಲಾಡಿಸುತ್ತಾ , ವ್ಯಾಪಾರ  ಮುಗಿಸಿಕೊಂಡು  ಬರುವ  ಯಂತ್ರಗಳಾಗಿದ್ದೇವೆ .
ಮೊನ್ನೆ  ಎಂದಿನಂತೆ  ಒಂದು  ಮಾಲ್ ಗೆ  ಹೋಗಿ ಬಂದಾಗ , ಮನೆಯಲ್ಲಿ  ನನ್ನ  ಹೆಂಡತಿಯು  ತಂದ  ಹಣ್ಣು-ತರಕಾರಿಗಳ   ಚೀಲದಲ್ಲಿದ್ದ   ಒಂದು  ಪರಂಗಿ  ಹಣ್ಣನ್ನು  ಕೈಗೆತ್ತಿಕೊಂಡು  ನೋಡಿದೆ . ಸುಲಿದ  ತೆಂಗಿನಕಾಯಿಗಿಂತ  ಸ್ವಲ್ಪ  ದಪ್ಪವಾಗಿದ್ದ   ಆ  ಹಣ್ಣಿನ  ಮೇಲೆ  ಅಂಟಿಸಿದ್ದ  ರೇಟನ್ನು  ಕಂಡು  ಗಾಬರಿಯಾಗಿ-
" ಏನೇ , ಇದಕ್ಕೆ  ಹದಿನೆಂಟು   ರೂಪಾಯ ? "
" ಹೂ ... ಹದಿನೆಂಟು  ರೂಪಾಯಿ ."
" ಯಾಕೆ  ಹದಿನೆಂಟು ? "
" ಅದರ  ಮೇಲೆ  ಬರೆದಿದೆ .... ಅದಕ್ಕೆ 

ಏನ್ ಹೇಳನವ್ವ ?

 ಅಲ್ಲೊಂದು  ಊರು . ಆ  ಊರಿನಲ್ಲಿ  ಒಂದು  ದೇಗುಲ . ದೇಗುಲದಲ್ಲಿ  ಒಬ್ಬ  ಪೂಜಾರಿ . ಸುಮಾರು  ನಲವತ್ತರ  ವಯಸ್ಸಿನ  ಆ  ಪೂಜಾರಿ  ಅಂತಿಂತ  ಪೂಜಾರಿಯಲ್ಲ !  ದೇವತೆಯ  ಹೆಸರಿನಲ್ಲಿ  ದೆವ್ವಗಳನ್ನು  ಬಿಡಿಸುವ  ಪೂಜಾರಿ . ವಾರದಲ್ಲಿ  ಎರಡು  ದಿನ  ಅಂದರೆ  ಪ್ರತಿ  ಮಂಗಳವಾರ – ಶುಕ್ರವಾರಗಳಂದು  ದೇವತೆಯು  ಆ  ಪೂಜಾರಿಯ  ಮಯ್ ಮೇಲೆ  ಬರುತ್ತಾಳಂತೆ . ಆಗ  ಅವನು  ನುಡಿದಿದ್ದೆಲ್ಲವೂ  ದೇವತೆಯ  ಮಾತು ;  ಮಾಡಿದ್ದೆಲ್ಲವೂ  ದೇವತೆಯ  ಕೆಲಸ . ಆ  ಪೂಜಾರಿಯು  “ ಅದು  ಹೇಗೆ  ದೆವ್ವ  ಬಿಡಿಸುತ್ತಾನೆ ? “ ಎಂಬುದನ್ನು  ನೋಡಬೇಕೆಂಬ  ಕುತೂಹಲದಿಂದ ,  ಒಂದು  ಶುಕ್ರವಾರದಂದು  ಗೆಳೆಯರೊಬ್ಬರ  ಜತೆಗೂಡಿ  ಅಲ್ಲಿಗೆ  ಹೋದಾಗ , ದೇಗುಲದಲ್ಲಿ  ಕಂಡ  ನೋಟ  ಹಾಗೂ  ನಡೆಯುತ್ತಿದ್ದ  ಆಚರಣೆಗಳು  ಈ  ರೀತಿ  ಇದ್ದವು . 
ಕುಂಕುಮ , ಅರಿಸಿನ  ಮತ್ತು  ನಾನಾ  ತೆರನಾದ  ಹೂವುಗಳಿಂದ  ದೇವತೆಯನ್ನು  ಸಿಂಗರಿಸಲಾಗಿತ್ತು . ದೇವತೆಯ  ವಿಗ್ರಹದ  ಮುಂದೆ  ದೀಪ  ಬೆಳಗುತ್ತಿತ್ತು . ಸಾಂಬ್ರಾಣಿಯ  ದೂಪದ  ಹೊಗೆಯು  ಎಲ್ಲೆಡೆಯಲ್ಲಿಯೂ  ಹರಡಿತ್ತು . ದೇವತೆಯ  ವಿಗ್ರಹದ  ಮುಂದೆ  ಬಲಬದಿಯಲ್ಲಿ  ಪೂಜಾರಿ  ಕುಳಿತು , ಬಾಯಲ್ಲಿ  ಏನೇನೋ  ಮಂತ್ರಗಳನ್ನು  ಉಚ್ಚರಿಸುತ್ತಿದ್ದ . ಕೆಂಪನೆಯ  ಕೆಂಡದ  ಮೇಲೆ  ಸಾಂಬ್ರಾಣಿ ಪುಡಿಯನ್ನು  ಮತ್ತೆ ಮತ್ತೆ  ಹಾಕುತ್ತಿದ್ದ . ಅವನ  ಮುಂದೆ  ಸುಮಾರು  ಮೂವತ್ತು ಮಂದಿ  ಹೆಂಗಸರು  ಕುಳಿತಿದ್ದರು . ಅವರಲ್ಲಿ  ಹತ್ತು-ಹನ್ನೆರಡು  ಮಂದಿ  ಸುಮಾರು  ಹದಿನಾರರಿಂದ  ಇಪ್ಪತ್ತಯ್ದರ  ವಯೋಮಾನದ  ತರುಣಿಯರು . ಉಳಿದವರೆಲ್ಲಾ  ಅಯ್ವತ್ತು-ಅಯ್ವತ್ತಯ್ದರ  ಅಂಚಿನವರು . ಅವರಲ್ಲಿ  ಹೆಚ್ಚಿನ  ಮಂದಿ  ಅಲ್ಲಿದ್ದ  ಹರೆಯದ  ಹೆಂಗಸರ  ತಾಯಂದಿರಾಗಿದ್ದರು . ತಮ್ಮ  ಹೆಣ್ಣು ಮಕ್ಕಳನ್ನು  ಮೆಟ್ಟಿಕೊಂಡು  ಕಾಡುತ್ತಿರುವ  ದೆವ್ವವನ್ನು  ಬಿಡಿಸಲೆಂದು  ಅವರೆಲ್ಲರೂ  ಪೂಜಾರಿಯ  ಬಳಿಗೆ  ತಮ್ಮ  ಮಕ್ಕಳನ್ನು  ಕರೆತಂದಿದ್ದರು .
ಇದುವರೆಗೆ  ಮಂತ್ರಗಳನ್ನು  ಹೇಳುತ್ತಾ , ದೇವತೆಯ  ಪೂಜೆಯಲ್ಲಿ  ಮಗ್ನನಾಗಿದ್ದ  ಪೂಜಾರಿಯು  ಈಗ  ಇದ್ದಕ್ಕಿದ್ದಂತೆಯೇ  ಆಕಳಿಸತೊಡಗಿದ . ತನ್ನ  ಎರಡು ತೋಳುಗಳನ್ನು  ಅತ್ತ-ಇತ್ತ  ಆಡಿಸುತ್ತಾ , ಮಯ್ ಮುರಿಯತೊಡಗಿದ . ಅಲ್ಲಿದ್ದವರೆಲ್ಲರೂ  ಅವನನ್ನೇ  ಅಂಜಿಕೆ  ಹಾಗೂ  ಆತಂಕದಿಂದ  ನೋಡತೊಡಗಿದರು . ಪೂಜಾರಿಯ  ಆಕಳಿಕೆ  ಇನ್ನೂ  ಹೆಚ್ಚಾಯಿತು . ಅವನ  ಮಯ್ ಕಯ್ಗಳ  ತೊನೆದಾಟ  ಹೆಚ್ಚಾಗುತ್ತಿದ್ದಂತೆಯೇ  ಒಮ್ಮೆ  ಜೋರಾಗಿ  ಗರ್ಜಿಸಿದ . ಈಗ  ತನ್ನ  ಮುಂದೆ  ಕುಳಿತಿದ್ದ  ತರುಣಿಯರಲ್ಲಿ  ಒಬ್ಬಳನ್ನು  ತನ್ನ   ಹತ್ತಿರಕ್ಕೆ   ಎಳೆದುಕೊಂಡು , ಒಂದು ಕಯ್ಯಲ್ಲಿ  ಅವಳ  ನೆತ್ತಿಯ  ತಲೆಗೂದಲನ್ನು  , ಮತ್ತೊಂದು  ಕಯ್ಯಲ್ಲಿ  ಅವಳ  ರೆಟ್ಟೆಯನ್ನು  ಅತಿ  ಬಿಗಿಯಾಗಿ  ಹಿಡಿದುಕೊಂಡು-
“ ಏ…. ನನ್ನ  ಯಾರು  ಅಂತ  ತಿಳ್ಕೊಂಡಿದ್ದೀಯೆ  ? …. ನಾನು  ಅಂತಿಂತ  ದೇವತೆಯಲ್ಲ ! …. ನಿನ್ನಂತ  ನೂರಾರು  ದೆವ್ವಗಳನ್ನ  ಹೇಳ  ಹೆಸರಿಲ್ದಂಗೆ  ಮಾಡಿರೂ  ಮಹಾದೇವತೆ…. ನನ್  ಮುಂದೆ  ನಿನ್  ಆಟ  ಏನೇನೂ  ನಡೆಯೂದಿಲ್ಲ “ ಎಂದು  ಏರು ದನಿಯಲ್ಲಿ  ಹೇಳುತ್ತಾ ,  ಆ  ತರುಣಿಯ  ತಲೆಗೂದಲನ್ನು  ಬಿಗಿಯಾಗಿ  ನುಲಿದು , ಮತ್ತೆ  ಮತ್ತೆ  ಹೂಂಕರಿಸುತ್ತಾ-
“ ಹೂ….ಹೇಳು  ನೀನ್ಯಾರು  “ ಎಂದು  ಪ್ರಶ್ನಿಸಿದ .
ಪೂಜಾರಿಯ  ಬಿಗಿಹಿಡಿತದಲ್ಲಿ  ಸಿಲುಕಿರುವ  ತರುಣಿಯು  ಅಪಾರವಾದ  ನೋವು  ಮತ್ತು  ಹೆದರಿಕೆಯಿಂದ  ತತ್ತರಿಸುತ್ತಾ , ಅವನನ್ನೇ  ದೀನಳಾಗಿ  ನೋಡತೊಡಗಿದಳು . ತರುಣಿಯ  ಹಿಂದೆಯೇ  ಕುಳಿತಿದ್ದ  ಅವಳ  ತಾಯಿಯು  ಮಗಳ  ಬೆನ್ನನ್ನು  ಕಯ್ಯಿಂದ  ತಿವಿದು-
“ ಯಾಕೆ  ಸುಮ್ಮನಿದ್ದೀಯೆ….ಮಾತಾಡೆ….ಅಟ್ಟೀಲಾದ್ರೆ  ಹೊತ್ತುಗೊತ್ತಿಲ್ದಂಗೆ  ಮಯ್ ಮೇಲೆ  ಬಂದು  ಬಾಯಿಗೆ  ಬಂದಂಗೆಲ್ಲ  ಬಡ್ಕೊತಿದ್ದೆ . ಇಲ್ಲೇನಾಗಿದ್ದದು  ನಿಂಗೆ ? “ ಎಂದು  ಹಂಗಿಸಿದಳು . ತಾಯಿಯ  ಕಣ್ಣಿನಲ್ಲಿ  ಈಗ  ಆಕೆಯು  ತನ್ನ  ಮಗಳಾಗಿರಲಿಲ್ಲ ; ದೆವ್ವವಾಗಿದ್ದಳು . ಆದುದರಿಂದಲೇ  ಮಗಳ  ನಡೆನುಡಿಗಳೆಲ್ಲವನ್ನೂ   ಅವಳನ್ನು  ಮೆಟ್ಟಿಕೊಂಡಿರುವ  ದೆವ್ವದ  ವರ್ತನೆಗಳೆಂದೇ  ನಂಬಿದ್ದಳು . ದೆವ್ವದ  ಹಿಡಿತಕ್ಕೆ  ಒಳಗಾಗಿ  ಸಂಕಟಪಡುತ್ತಿರುವ  ಮಗಳಿಗಾಗಿ  ಕಣ್ಣೀರು  ಕರೆಯುತ್ತಾ , ಪೂಜಾರಿಗೆ  ಕಯ್ ಮುಗಿದು , ಅವನ  ಮಯ್ ತುಂಬಿ  ಬಂದಿರುವ  ದೇವತೆಯನ್ನು  ಕುರಿತು-
“ ಅವ್ವ  ಮಾತಾಯಿ , ಹೆಂಗಾರ  ಮಾಡಿ  ನನ್  ಮಗಳಿಗೆ  ಹಿಡಿದಿರುವ  ದೆವ್ವ  ಬುಡಸವ್ವ . ನೀ  ಏನ್  ಕೇಳ್ತೀಯೊ   ಅದನ್ನ  ಮಾಡಿಸಿಕೊಡ್ತೀನಿ  ಕಣವ್ವ . ನನ್  ಜೀವ  ಇರೋ  ತಂಕ  ನಿನ್  ಸೇವೆ  ಮಾಡ್ತೀನಿ “ ಎಂದು  ಹರಕೆಯನ್ನು  ಕಟ್ಟಿಕೊಂಡಳು .
ಪೂಜಾರಿಯು  ಈಗ  ಇನ್ನೂ  ಜೋರಾಗಿ  ಗರ್ಜಿಸುತ್ತಾ , ಆ  ತರುಣಿಯ  ಮುಡಿಯನ್ನು  ಜಗ್ಗತೊಡಗಿದ . ಅವಳು  ಅತಿಯಾದ  ನೋವಿನಿಂದ  ನರಳುತ್ತಿರುವಾಗಲೇ , ಅವಳ  ಮುಂದೆ  ಸಿಪ್ಪೆ ಸುಲಿದ  ಒಂದು  ತೆಂಗಿನಕಾಯನ್ನು  ಇಟ್ಟು-
“ ಏ….ಈಗ  ನೀನು  ಕಾಯಿನ  ಮೇಲೆ  ಕುಕ್ಕುರುಗಾಲಿನಲ್ಲಿ  ಕುಂತ್ಕೊ . ನೀನು  ಹೆಣ್  ಗಾಳಿಯಾಗಿದ್ದರೆ  ಎಡಚರಿಯಿಂದ  ತಿರುಗು…. ಗಂಡ್  ಗಾಳಿಯಾಗಿದ್ದರೆ  ಬಲಚರಿಯಿಂದ  ತಿರುಗು “ ಎಂದು  ಅಪ್ಪಣೆ  ಹೊರಡಿಸಿ , ಅವಳನ್ನು  ತೆಂಗಿನಕಾಯಿಯ  ಮೇಲೆ  ಎರಡು  ಪಾದಗಳನ್ನಿಟ್ಟು  ಕುಳಿತುಕೊಳ್ಳುವಂತೆ  ಪೀಡಿಸತೊಡಗಿದ . ಚಿಕ್ಕ ಕಾಯಿಯ  ಮೇಲೆ  ಕುಳಿತುಕೊಳ್ಳಲಾಗದೆ , ಆಕೆಯು  ಜಾರಿ ಜಾರಿ  ಬೀಳುತ್ತಾ , ಒದ್ದಾಡುತ್ತಿರುವಾಗ , ರೆಟ್ಟೆಯನ್ನು  ಹಿಡಿದಿದ್ದ  ಕಯ್ಯನ್ನು  ಸಡಿಲಿಸಿ , ಈಗ  ಆಕೆಯನ್ನು  ತನ್ನ  ಎದೆಗಾನಿಸಿ  ಬಿಗಿಯಾಗಿ  ತಬ್ಬಿಕೊಂಡು , ಅವಳನ್ನು ಕಾಯಿಯ  ಮೇಲೆ  ಕುಳ್ಳಿರಿಸಿದ . ಪೂಜಾರಿಯ  ಬಲವಾದ  ಅಪ್ಪುಗೆಯಲ್ಲಿ  ಆಕೆಯು  ನಲುಗಿ  ಹೋಗುತ್ತಿದ್ದಳು . ಸುತ್ತಮುತ್ತಲಿದ್ದ  ಹೆಂಗಸರು  ಬಹಳ  ಆತಂಕ , ಕುತೂಹಲ  ಹಾಗೂ  ನಂಬಿಕೆಯಿಂದ  ದೇವತೆಯ  ಮಹಿಮೆಯನ್ನು  ನೋಡುತ್ತಿದ್ದರು . ಪೂಜಾರಿಯ  ಹಿಡಿತ  ಇನ್ನೂ  ಹೆಚ್ಚಾಯಿತು . ಆಕೆಯನ್ನು  ಕುರಿತು-
“ ಏ….ಹೇಳು….ನೀನ್ಯಾರು ?....ಯಾಕ್  ಬಂದೆ ?....ಎಲ್ಲಿಂದ  ಬಂದೆ ?....ಬಾಯ್ಬುಡು “ ಎಂದು  ಅಬ್ಬರಿಸತೊಡಗಿದ . ಪೂಜಾರಿಯ  ಪ್ರಶ್ನೆಗಳಿಂದ  ಕಂಗಾಲಾದ  ತರುಣಿಯು  ಏನೊಂದನ್ನು  ಮಾತನಾಡದೆ , ಹಿಂತಿರುಗಿ  ತನ್ನ  ತಾಯಿಯನ್ನು  ನೋಡುತ್ತಾ “ ಅವ್ವ….ಅವ್ವ….ಅವ್ವ “ ಎಂದು  ನೋವಿನ  ದನಿಯಿಂದ  ಮೊರೆಯಿಟ್ಟಳು . ಕೂಡಲೇ  ಅವಳ ಅವ್ವ  ಇನ್ನೂ  ಕೆರಳಿ ಕೆಂಡವಾಗಿ-
“ ಚಿನಾಲ್ ಮುಂಡೆ….ಇತ್ತಗೇನ್  ನೋಡಿಯಮ್ಮಿ….ಅತ್ತಗೆ  ತಿರಿಕೊಂಡು  ಮಾತಾಡಮ್ಮಿ….ನನ್  ಮಗಳ  ಮ್ಯಾಲೆ  ಯಾಕೆ  ಬಂದಿದ್ದೀಯೆ  ಕಲಕೆತ್ತ ಮುಂಡೆ….ಅಟ್ಟೀಲಾದ್ರೆ  ದಿನಕ್ಕೆ  ನಾಕು  ದಪ  ಅಯ್ದು  ದಪ  ಬಂದು  ಬಂದು  ರಂಪ  ಮಾಡ್ತಿದ್ದೆ….ಇಲ್ಲಿ  ಯಾಕಮ್ಮಿ  ಬಾಯ್  ಬುಡಲ್ಲೆ….ಏನಾರ  ಉಣ್ಣು ತಿನ್ನು  ಆಸೆಯಿದ್ರೆ  ದೇವತೆ  ಮುಂದೆ  ಹೇಳು….ಅದನ್ನೆಲ್ಲ  ಅಟ್ಟು  ಉಣಿಸ್ತೀನಿ “ ಎಂದು  ಹೇಳುತ್ತಾ , ಪೂಜಾರಿಗೆ  ಮತ್ತೊಮ್ಮೆ  ಕಯ್ ಮುಗಿದು “ ಮಾತಾಯಿ , ನನ್ನವ್ವ….ಈ ದರಿದ್ರದ  ದೆವ್ವಕ್ಕೆ  ಏನ್  ದಂಡನೆ  ಕೊಡ್ಬೇಕೋ  ಅದನ್ನೆಲ್ಲಾ  ಕೊಟ್ಟು , ನನ್ನ  ಮಗಳ  ಉಳಿಸ್ಕೊಡವ್ವ “ ಎಂದು  ಬೇಡಿಕೊಂಡಳು .
ಪೂಜಾರಿಯು  ಇನ್ನೂ  ಹೆಚ್ಚಿನ  ಹುರುಪಿನಿಂದ  ತನ್ನ  ಕಾರ್ಯವನ್ನು  ಮುಂದುವರಿಸಿದ . ತರುಣಿಯನ್ನು  ತೆಂಗಿನಕಾಯಿಯ  ಮೇಲೆ  ಕುಳಿತಿದ್ದಂತೆಯೇ  ನಾನಾ  ಬಗೆಗಳಲ್ಲಿ  ಪೀಡಿಸತೊಡಗಿದ .  ಆಕೆಯು  ಬಹಳ  ನೋವಿನಿಂದ  ನರಳುತ್ತಾ  ಒಂದು  ಸಾರಿ  ಎಡಮಗ್ಗುಲಾಗಿ  ತಿರುಗಿದಳು . ಮತ್ತೆ  ಅವಳನ್ನು  ಕುರಿತು-“ ಏ….ನಿನ್ನ  ಬಾಯ್  ಬುಡ್ಸೂದು  ಹೆಂಗೆ  ಅಂತ  ನಂಗೆ  ಗೊತ್ತು “ ಎಂದು  ಅಬ್ಬರಿಸಿ , ಮರುಗಳಿಗೆಯಲ್ಲೇ  ಅವಳ  ಮುಡಿಯನ್ನು  ಎಳೆದು ,  ಮಕ್ಕಳಿಗೆ  ಹಾಲುಣಿಸುವ  ಎದೆಗಳ  ಮೇಲೆ  ಬಲವಾಗಿ  ಹೊಡೆದ . ಪೂಜಾರಿಯ  ಹೊಡತದಿಂದ  ಆಕೆ  ನಡುಗತೊಡಗಿದಳು . ಸುತ್ತಮುತ್ತಲಿದ್ದ  ಹೆಂಗಸರೆಲ್ಲರೂ  ದೇವತೆಯ  ಮುಂದೆ  ದೆವ್ವ  ಕಂಪಿಸುತ್ತಿರುವುದನ್ನು  ಕಂಡು , ಇನ್ನೂ  ಹೆಚ್ಚಿನ  ನಂಬಿಕೆಯ  ಮನದಿಂದ  ಕಯ್  ಜೋಡಿಸಿ  ನಮಿಸುತ್ತಿದ್ದರು . ಇವರ  ಪ್ರತಿಕ್ರಿಯೆಯಿಂದ  ಹುರುಪುಗೊಂಡ  ಪೂಜಾರಿಯು  ತರುಣಿಯ  ಎದೆಗಳ  ಮೇಲೆ  ಮತ್ತೆ  ಮತ್ತೆ  ಬಲವಾಗಿ  ಹೊಡೆಯುತ್ತಾ-
“ ಏ….ನಾನ್  ನಿನ್ನ  ಬಿಡೋದಿಲ್ಲ….ನಿನ್  ಜೊತೇಲಿ  ಮಲಗ್ತೀನಿ….ಏನಂತೀಯಾ  ಇದಕ್ಕೆ ? “ ಎಂದಾಗ , ಪೂಜಾರಿಯ  ಮಾತುಗಳಿಗೆ  ಉತ್ತರಿಸದೆ , ಮೂಕಳಾದ  ತರುಣಿಯ  ಕಣ್ಣುಗಳಿಂದ  ಕಂಬನಿಗಳು  ಉದುರತೊಡಗಿದವು . ತರುಣಿಯ  ಪರವಾಗಿ  ಅವಳ  ಅವ್ವನೇ  ದೇವತೆಗೆ  ಉತ್ತರವನ್ನು  ಕೊಡುತ್ತಾ-
“ ಮಾತಾಯಿ , ನಿಂಗೆ  ಹೆಂಗೆ  ಬೇಕೋ  ಹಂಗೆ  ಮಾಡವ್ವ….ಒಟ್ನಲ್ಲಿ  ನನ್  ಮಗೀನ  ಜೀವಂತವಾಗಿ  ಉಳಿಸ್ಕೊಡವ್ವ “ ಎಂದು ಮತ್ತೆ  ಮೊರೆಯಿಟ್ಟಳು . ಪೂಜಾರಿಯು  ತರುಣಿಯನ್ನು  ಇನ್ನೂ  ಹತ್ತಿರಕ್ಕೆ  ಬರಸೆಳೆದು  ತಬ್ಬಿಕೊಂಡು-
“ ಏ…. ಬಾಯ್ಬುಡು….ನಾನ್  ನಿನ್  ತಕೆ  ಬಂದಾಗ  ಬಲಚರಿಯಿಂದ  ಸೆರಗು  ಹಾಸ್ತೀಯೋ….ಎಡಚರಿಯಿಂದ  ಹಾಸ್ತೀಯೋ….ಹೇಳು” ಎಂದು  ಆಕೆಯನ್ನು  ಒತ್ತಾಯಪಡಿಸುತ್ತಾ , ಆಕೆಯ  ಎದೆಗಳ  ಮೇಲೆ  ರಪರಪನೆ  ಬಡಿದು , ಕೆಲವು ಗಳಿಗೆ  ಕಯ್ಯನ್ನು  ಎದೆಗಳ  ಮೇಲಿಟ್ಟು  ಹಿಂಸಿಸತೊಡಗಿದ . ತೆಂಗಿನಕಾಯಿಯ  ಮೇಲೆ  ಕುಳಿತುಕೊಳ್ಳಲಾಗದೆ  ಒದ್ದಾಡುತ್ತಾ , ಜಾರಿ ಜಾರಿ ಬೀಳುತ್ತಾ  ಪಡುತ್ತಿರುವ  ಯಾತನೆಯ  ಜತೆಗೆ  ಪೂಜಾರಿಯು  ತನ್ನ  ಮೆತುವಾದ  ಎದೆಗಳ  ಮೇಲೆ  ಬಡಿದು  ನೀಡುತ್ತಿರುವ  ಹಿಂಸೆಯನ್ನು  ತಾಳಲಾರದೆ  ತರುಣಿಯು  ತನ್ನ  ಹೆತ್ತವ್ವನ  ಕಡೆ  ಮತ್ತೆ  ನೋಡತೊಡಗಿದಳು . ಪೂಜಾರಿಯು  ಹಿಡಿದ  ಪಟ್ಟನ್ನು  ಬಿಡದಂತೆ “ ಹೇಳು….ಯಾವ  ಕಡೆಯಿಂದ  ಸೆರಗು  ಹಾಕ್ತೀಯೆ….ಹೇಳು” ಎಂದು  ಪೀಡಿಸಿದಾಗ , ಆಕೆಯು  ಕಂಬನಿ ತುಂಬಿದ  ನೋಟದಿಂದ  ತಾಯಿಯತ್ತ  ತಿರುಗಿ  ದಿಕ್ಕು ತೋಚದಂತಾಗಿ-
“ ಏನ್  ಹೇಳನವ್ವ “ ಎಂದು  ಕೇಳಿದಳು . ಮಗಳ  ಪ್ರಶ್ನೆಗೆ  ಉತ್ತರ  ಕೊಡಲಾಗದೆ  ತಾಯಿಯು  ಅಳತೊಡಗಿದಳು . ಪೂಜಾರಿಯು  ತರುಣಿಯ  ಅವ್ವನನ್ನು  ಕುರಿತು-
“  ನೀನೇನು  ಅಳ್ಬೇಡ….ಹೆದರ್ಕೊಬ್ಯಾಡ….ನಂಬಿಕೆಯಿಂದಿರು . ನಂಗೆ  ಗೊತ್ತದೆ  ಹೆಂಗೆ  ಇದರ  ಬಾಯ್  ಬುಡ್ಸಬೇಕು  ಅಂತ . ಇನ್ನೂ  ಅಯ್ದು  ವಾರ  ಹಿಂಗೆ  ಕರ್ಕೊಂಡು  ಬತ್ತಿರು . ನನ್  ಕಣ್  ತಪ್ಪಿಸಿ  ಯಾವ  ಡಾಕ್ಟರು  ತಕೂ  ಕರ್ಕೊಂಡು  ಹೋಗಿ  ತೋರಿಸ್ಬೇಡ . ಆಸ್ಪತ್ರೆ  ಮೆಟ್ಲ  ಹತ್ತುದ್ರೆ  ನಿನ್  ಮಗಳೇ  ಕಯ್ಗೆ  ಸಿಗೂದಿಲ್ಲ “  ಎಂದು  ಎಚ್ಚರಿಸಿದ . ಆಗ  ಅವಳ  ಅವ್ವ   ದೇವತೆಗೆ  ಅಡ್ಡ ಬಿದ್ದು “ ಇಲ್ಲ  ಕಣವ್ವ , ನನ್  ಕಣ್ಣಾಣೆಗೂ  ಎಲ್ಗೂ  ಕರ್ಕೊಂಡು  ಹೋಗೂದಿಲ್ಲ . ಮೆಟ್ಕೊಂಡು  ಇರೂ  ದೆವ್ವ  ಬುಟ್ಟೋಗು  ತಂಕ  ನಿನ್ನತಕೆ  ಕರ್ಕೊಂಡು  ಬತ್ತಿನಿ “ ಎಂದು  ಉತ್ತರಿಸಿದಳು . ಪೂಜಾರಿಯು  ತರುಣಿಯ  ಮುಡಿಯನ್ನು  ಮತ್ತೊಮ್ಮೆ  ನುಲಿದು , ಅವಳನ್ನು   ಪಕ್ಕದಲ್ಲಿದ್ದ   ಗೋಡೆಗೆ  ಒರಗಿಸಿ , ತಾನು  ಬಿಗಿಯಾಗಿ  ಒತ್ತರಿಸಿಕೊಂಡು  ಕುಳಿತುಕೊಂಡ . ಈಗ  ತನ್ನ ಮುಂದೆ  ಮತ್ತೊಬ್ಬ  ತರುಣಿಯನ್ನು  ಕರೆತರುವಂತೆ  ಇನ್ನೊಬ್ಬ  ತಾಯಿಗೆ  ಅಪ್ಪಣೆ  ಮಾಡಿದ .
ನಾನು  ಮತ್ತು  ನನ್ನ  ಗೆಳೆಯ  ದೇವತೆಯ  ಹೆಸರಿನಲ್ಲಿ  ಹರೆಯದ  ಹೆಣ್ಣು ಮಕ್ಕಳಿಗೆ  ಕೊಡುತ್ತಿದ್ದ  ಹಿಂಸೆಯ  ಆಚರಣೆಯನ್ನು  ನೋಡಲಾಗದೆ  ದೇಗುಲದಿಂದ  ಹೊರಬಂದು  ಕುಳಿತುಕೊಂಡೆವು .  ಕಾಮುಕ  ಹಾಗೂ  ವಂಚಕನಾಗಿರುವ  ಪೂಜಾರಿಯಿಂದ  ಹಳ್ಳಿಯ  ಹೆಣ್ಣು ಮಕ್ಕಳು  ಪಡುತ್ತಿರುವ  ಮಯ್ ಮನದ  ಯಾತನೆಯ  ಬಗ್ಗೆ  ಚಿಂತಿಸುತ್ತಾ , ಇದನ್ನು  ಹೇಗಾದರೂ  ಮಾಡಿ  ನಿಲ್ಲಿಸಬೇಕೆಂಬ  ದಿಕ್ಕಿನಲ್ಲಿ  ಯೋಚಿಸಿದೆವು . ನಮ್ಮ  ಉದ್ದೇಶ  ದೇವತೆಯ  ಪೂಜೆಯನ್ನು  ಸಂಪೂರ್ಣವಾಗಿ  ನಿಲ್ಲಿಸುವುದಾಗಿರಲಿಲ್ಲ . ಏಕೆಂದರೆ  ದೇವರ  ಎದುರಾಗಿ  ಆಡುವ  ಮಾತು  ಇಲ್ಲವೇ  ಮಾಡುವ  ಯಾವುದೇ  ಕಾರ್ಯಗಳಿಗೆ  ಜನಸಮುದಾಯದಿಂದ  ಹೆಚ್ಚಿನ  ಅಡೆತಡೆಗಳು  ಎದುರಾಗುತ್ತವೆ . ಆದುದರಿಂದ  ದೇವತೆಯನ್ನು  ಹೊರತು ಪಡಿಸಿ , ದೇವತೆಯ  ಹೆಸರಿನಲ್ಲಿ  ಪೂಜಾರಿಯು  ಮಾಡುತ್ತಿರುವ  ಕಾಮವಿಕಾರದ  ಆಚರಣೆಗಳನ್ನು  ತಡೆಗಟ್ಟಿ , ಹೆಣ್ಣು ಮಕ್ಕಳಿಗೆ  ಕೊಡುತ್ತಿರುವ  ಹಿಂಸೆ  ನಿಲ್ಲುವಂತೆ  ಮಾಡಬೇಕೆಂಬುದನ್ನು  ಮಾತ್ರ   ಗುರಿಯನ್ನಾಗಿ  ಇಟ್ಟುಕೊಂಡೆವು . ಇದಕ್ಕಾಗಿ  ಒಂದು  ಯೋಜನೆಯನ್ನು  ಹಾಕಿಕೊಂಡೆವು . ಅಂದಿನಿಂದಲೇ  ಆ  ದೇವತೆಯಲ್ಲಿ  ನಂಬಿಕೆಯುಳ್ಳವರಂತೆ  ನಟಿಸುತ್ತಾ , ಅಲ್ಲಿಗೆ  ಬರುತ್ತಿದ್ದ  ವ್ಯಕ್ತಿಗಳ  ಮಾಹಿತಿಯನ್ನು  ಸಂಗ್ರಹಿಸತೊಡಗಿದೆವು . ನಾಲ್ಕಾರು  ವಾರ  ದೇವತೆಯ  ಪೂಜೆಯನ್ನು  ಚಾಚೂ  ತಪ್ಪದೆ  ಗಮನಿಸಿದೆವು . ದೇಗುಲಕ್ಕೆ  ಬರುತ್ತಿದ್ದ  ಜನರಲ್ಲಿ  ಗಂಡಸರು  ಬೆರಳೆಣಿಕೆಯಲ್ಲಿದ್ದರೆ , ಹೆಂಗಸರೇ  ಹೆಚ್ಚಾಗಿದ್ದರು . ವಯಸ್ಸಾಗಿದ್ದ  ಹೆಂಗಸರನ್ನು  ಮತ್ತು  ದೆವ್ವ  ಮೆಟ್ಟಿತೆಂದು  ಕರೆತರುತ್ತಿದ್ದ  ತರುಣಿಯರನ್ನು  ಮಾತನಾಡಿಸುತ್ತಾ , ಅವರ  ನೋವು / ಸಂಕಟ / ವೇದನೆಯ  ಹಿನ್ನೆಲೆಯನ್ನು  ವಿಚಾರಿಸಿದಾಗ , ನಮಗೆ  ತಿಳಿದು  ಬಂದ  ಸಂಗತಿಗಳು  ಈ  ರೀತಿ  ಇದ್ದವು .
ಈ  ದೇಗುಲಕ್ಕೆ  ತಮ್ಮ  ಹೆಣ್ಣು ಮಕ್ಕಳನ್ನು  ಕರೆ ತರುತ್ತಿದ್ದ  ತಾಯಂದಿರಲ್ಲಿ , ಹೆಚ್ಚಿನ  ಮಂದಿ  ಹಣಕಾಸಿನ  ಅನುಕೂಲವಿಲ್ಲದವರು , ಅವಿದ್ಯಾವಂತರು  ಮತ್ತು  ದೇವರು-ದಿಂಡರಲ್ಲಿ  ಅಪಾರವಾದ  ನಂಬಿಕೆಯುಳ್ಳವರು . ಇಂತಹ  ಸಾಮಾಜಿಕ ನೆಲೆಯಿಂದ  ಬಂದ  ತಾಯಂದಿರು  ಅಲ್ಲಿಗೆ  ಕರೆದುಕೊಂಡು  ಬರುತ್ತಿದ್ದ  ಹೆಣ್ಣು ಮಕ್ಕಳಲ್ಲಿ  ಹೆಚ್ಚಿನ  ಮಂದಿ  ಚೊಚ್ಚಲ  ಬಾಣಂತಿಯರು . ಹೆರಿಗೆಯಾದ  ನಂತರದ  ಒಂದೆರಡು  ತಿಂಗಳುಗಳಲ್ಲಿ   ತೀವ್ರವಾದ  ಅನಾರೋಗ್ಯದಿಂದ  ಬಳಲಿ  ಬೆಂಡಾಗಿದ್ದವರು . ಇವರ  ಹೆರಿಗೆಯು  ಡಾಕ್ಟರು / ನರ್ಸ್ ಗಳಿಂದ   ಕೂಡಿರುವ  ಆಸ್ಪತ್ರೆಗಳಲ್ಲಿ  ಆಗಿರಲಿಲ್ಲ . ಹಳ್ಳಿಗಾಡಿನಲ್ಲಿರುವ  ಹಿರಿಯ  ಹೆಂಗಸರೇ  ಹೆರಿಗೆಯಾಗುವಾಗ  ದಾದಿಯರಾಗಿ  ಉಪಚರಿಸಿದ್ದರು . ಆಗ  ಮಗುವಿನ  ಹೊಕ್ಕುಳ ಬಳ್ಳಿಯನ್ನು  ಕತ್ತರಿಸುವಾಗ  ಉಂಟಾದ  ನಂಜಿನಿಂದಲೋ  ಇಲ್ಲವೇ   ಒಳ್ಳೆಯ  ಆಹಾರದ  ಕೊರತೆಯಿಂದಲೋ   ಎಳೆಯ  ಕಂದಮ್ಮಗಳನ್ನು ಕೆಲವರು  ಕಳೆದುಕೊಂಡು  ಸಂಕಟಕ್ಕೊಳಗಾಗಿದ್ದರು . ಮತ್ತೆ  ಕೆಲವರು  ಹದಿನೆಂಟು  ವಯಸ್ಸು  ತುಂಬುವ  ಮೊದಲೇ  ಮದುವೆಯಾಗಿ , ಬಸಿರಾಗಿ , ಮಗುವನ್ನು  ಹಡೆದು  ನಿತ್ರಾಣಗೊಂಡಿದ್ದರು . ಇನ್ನೂ  ಕೆಲವರು ಕುಡುಕ  ಗಂಡನ  ಕಿರುಕುಳಕ್ಕೆ  ಬಲಿಯಾಗಿ , ಅಂತಹ  ಕೆಟ್ಟ ಚಟದ  ಗಂಡನ  ಜತೆ  ಸಂಸಾರ  ಮಾಡಲು  ಹೇಸುತ್ತಿದ್ದರು . ಕೆಲವರು  ಮದುವೆಯ  ಸಮಯದಲ್ಲಿ  ನಡೆದಿದ್ದ  ಮಾತುಕತೆಯಂತೆ  ನಿಗದಿ ಪಡಿಸಿದ್ದ  ವರೋಪಚಾರದ  ಸಂಪತ್ತು  ಸಂಪೂರ್ಣವಾಗಿ ಇನ್ನೂ  ಸಂದಾಯವಾಗದೇ  ಇದ್ದುದರಿಂದ , ಅತ್ತೆಯ  ಮನೆಯಲ್ಲಿ ಪಟ್ಟಿದ್ದ  ಕಿರುಕುಳ  ಮತ್ತು  ಅಪಮಾನವನ್ನು  ನೆನಪಿಸಿಕೊಂಡಂತೆಲ್ಲಾ  ಬೆಚ್ಚಿಬೀಳುತ್ತಿದ್ದರು .  ಅಂತಹ  ನರಕಕ್ಕೆ  ಮತ್ತೆ  ಹೋಗಲು  ಹಿಂಜರಿಯುತ್ತಿದ್ದರು . ಈ  ರೀತಿ  ನಾನಾ  ಬಗೆಯ  ಕುಟುಂಬ / ಸಾಮಾಜಿಕ  ಕಾರಣಗಳಿಂದಾಗಿ  ಒಳಗೊಳಗೆ  ಬೇಯುತ್ತಿದ್ದ  ತರುಣಿಯರು  ಕೆಲವೊಮ್ಮೆ  ಬಾಯಿಗೆ  ಬಂದಂತೆ  ಬಡಬಡಿಸುತ್ತಿದ್ದರು . ತಮ್ಮಲ್ಲೇ  ಏನೇನೋ  ಮಾತನಾಡಿಕೊಳ್ಳುತ್ತಾ , ಮಾನಸಿಕವಾಗಿ  ಕುಗ್ಗಿಹೋಗಿದ್ದರು . ಜೀವನದಲ್ಲಿ  ಆಸಕ್ತಿಯನ್ನು  ಕಳೆದುಕೊಂಡು  ಮಂಕಾಗಿದ್ದರು .  ತಮ್ಮ  ಹೆಣ್ಣು  ಮಕ್ಕಳ  ನಡೆನುಡಿಗಳಲ್ಲಿ  ಉಂಟಾದ  ಬದಲಾವಣೆಗಳಿಗೆ  ಸರಿಯಾದ  ಕಾರಣಗಳನ್ನು  ಗುರುತಿಸಲಾರದ  ತಾಯಂದಿರು , ಇದನ್ನೇ  ‘ ದೆವ್ವದ  ಕಾಟ ‘ ವೆಂದು  ತಪ್ಪಾಗಿ  ತಿಳಿದು ,  ಗಾಳಿ-ಗರ  ಬಿಡಿಸಲೆಂದು  ಈ  ದೇವತೆಯ  ಬಳಿಗೆ  ಕರೆತರುತ್ತಿದ್ದರು .  ತಮ್ಮ  ಮಕ್ಕಳನ್ನು  ಮೆಟ್ಟಿಕೊಂಡಿರುವ  ದೆವ್ವವು  ದೇವತೆಯ  ಶಕ್ತಿ  ಹಾಗೂ  ಮಹಿಮೆಯ  ಮುಂದೆ  ನಿಲ್ಲಲಾಗದೆ  ಓಡಿಹೋಗುವುದೆಂಬ  ನಂಬಿಕೆಯು  ಈ  ತಾಯಂದಿರಲ್ಲಿತ್ತು .
ತನ್ನ  ಬಳಿ  ಕರೆತರುವ  ಹೆಣ್ಣು ಮಕ್ಕಳನ್ನು  ಯಾವುದೇ  ಡಾಕ್ಟರ  ಬಳಿಗಾಗಲಿ  ಇಲ್ಲವೇ  ಆಸ್ಪತ್ರೆಗಾಗಲಿ  ಕರೆದುಕೊಂಡು  ಹೋಗಲೇಬಾರದು  ಎಂಬ  ಪೂಜಾರಿಯ  ಮಾತುಗಳನ್ನು  ತಾಯಂದಿರು  ದೇವತೆಯ  ಆದೇಶವೆಂದೇ  ನಂಬಿದ್ದರು . ಇಂತಹ  ತಪ್ಪು ತಿಳುವಳಿಕೆ  ಹಾಗೂ  ನಂಬಿಕೆಯಿಂದ   ಈ  ಹಿಂದೆ  ಇಲ್ಲಿಗೆ  ಬಂದಿದ್ದ   ತರುಣಿಯರಲ್ಲಿ  ಒಂದಿಬ್ಬರ  ರೋಗ  ಹೆಚ್ಚಾಗಿ , ಸಾವನ್ನಪ್ಪಿದ  ಸುದ್ದಿಯು  ನಮಗೆ  ತಿಳಿದು ಬಂತು .  ತಾಯಂದಿರು  ತಮ್ಮ  ಹೆಣ್ಣು ಮಕ್ಕಳನ್ನು  ಕಳೆದುಕೊಂಡಾಗ  ಗೋಳಾಡುತ್ತಾ –“ ಅವಳ  ಹಣೇಬರಹನೇ  ಹಂಗಿತ್ತು . ಅದಕ್ಕೆ  ದೆವ್ವ  ಮುರ್ಕೊತು “  ಎಂದು  ಅತ್ತು ಅತ್ತು  ಸುಮ್ಮನಾಗುತ್ತಿದ್ದರು . ಹಳ್ಳಿಯ  ಹೆಂಗಸರ   ಈ  ಬಗೆಯ  ನಂಬಿಕೆಯನ್ನು  ಪೂಜಾರಿಯು  ಚೆನ್ನಾಗಿ  ದುರುಪಯೋಗ  ಮಾಡಿಕೊಳ್ಳುತ್ತಿದ್ದ . 
ಹೀಗೆ  ಮಾಹಿತಿ  ಸಂಗ್ರಹ  ಮತ್ತು  ಅವನ್ನು  ಕುರಿತ  ಚಿಂತನೆಯ  ನಂತರ , ನಮ್ಮ  ಮುಂದೆ  ಎರಡು  ಪ್ರಶ್ನೆಗಳು  ಎದುರಾದವು . ಅಕ್ಕರದ  ಅರಿವಿಲ್ಲದೆ  , ಪರಂಪರೆಯಿಂದ  ಬಂದಿರುವ  ನಂಬಿಕೆಯನ್ನು  ಬಲವಾಗಿ  ತಬ್ಬಿಕೊಂಡಿರುವ  ಇಂತಹ  ತಾಯಂದಿರಿಗೆ  ಕೆಡುಕನಾಗಿರುವ  ಪೂಜಾರಿಯ  ಬಳಿಗೆ  ತಮ್ಮ  ಹೆಣ್ಣು ಮಕ್ಕಳನ್ನು  ಕರೆತರದಂತೆ  ತಿಳುವಳಿಕೆಯನ್ನು  ಹೇಳುವುದೋ ?  ಇಲ್ಲವೇ  ಪೂಜಾರಿಯು  ಮಾಡುತ್ತಿರುವ  ಹಿಂಸೆಯಿಂದ  ಕೂಡಿರುವ  ಕಾಮದ  ಹಲ್ಲೆಯ  ಆಚರಣೆಯನ್ನು  ತಡೆಗಟ್ಟುವುದೋ ?  ತಲತಲಾಂತರದಿಂದ  ಜನಸಮುದಾಯದ  ನಡೆನುಡಿಗಳಲ್ಲಿ  ಕಂಡುಬರುತ್ತಿರುವ   ನಂಬಿಕೆಗಳಲ್ಲಿನ  ಒಳಿತು-ಕೆಡುಕಿನ  ಸಂಗತಿಗಳನ್ನು  ತಿಳಿದುಕೊಂಡು , ಕೆಡುಕಿನ  ಆಚರಣೆಗಳನ್ನು  ಬಿಡುವುದಾಗಲಿ / ಬಿಡುವಂತೆ  ಮಾಡುವುದಾಗಲಿ  ಬಹಳ  ತ್ರಾಸದಾಯಕವಾದ  ಕೆಲಸ .
ಸುಮಾರು  ಆರು  ಸಾವಿರಕ್ಕಿಂತಲೂ  ಹೆಚ್ಚಿನ  ಜನರು  ವಾಸಿಸುತ್ತಿರುವ  ಈ  ಊರಿನಲ್ಲಿ  ಶಾಲಾಕಾಲೇಜುಗಳು , ಸರ್ಕಾರಿ  ಆಸ್ಪತ್ರೆ  ಹಾಗೂ  ಪೋಲಿಸ್ ಕಚೇರಿಗಳಿದ್ದವು . ಸಾಮಾಜಿಕ  ಒಳಿತಿಗಾಗಿ  ದುಡಿಯುವ  ಯುವಕಯುವತಿಯರಿಂದ  ಕೂಡಿದ  ಒಕ್ಕೂಟಗಳಿದ್ದವು . ಆದರೆ  ಯಾರೊಬ್ಬರಾಗಲಿ / ಯಾವುದೇ  ಒಕ್ಕೂಟವಾಗಲಿ  ಹಲವಾರು  ವರುಶಗಳಿಂದ  ತಮ್ಮ  ಊರಿನ  ದೇಗುಲದಲ್ಲಿ  ನಡೆಯುತ್ತಿದ್ದ  ಇಂತಹ  ಕೆಟ್ಟ  ಆಚರಣೆಯ  ಎದುರಾಗಿ  ಒಂದು  ಸಣ್ಣ  ದನಿಯನ್ನೂ  ಎತ್ತಿರಲಿಲ್ಲ . 
ಏಕೋ …. ಏನೋ … ಇಲ್ಲಿಯವರೆಗೂ  ಉತ್ಸಾಹದಿಂದ  ಹೆಜ್ಜೆಗಳನ್ನು  ಇಟ್ಟಿದ್ದ  ನನ್ನಲ್ಲಿ ,  ಈಗ  ಒಂದು  ಬಗೆಯ  ಹಿಂಜರಿಕೆ  ಶುರುವಾಯಿತು . ಈ  ಊರನವರೇ  ಇಂತಹ  ಅನ್ಯಾಯವನ್ನು  ನೋಡಿಕೊಂಡು  ಸುಮ್ಮನಿರುವಾಗ , ಹೊರ  ಊರಿನಿಂದ  ಬಂದು  ಹೋಗುವ  ನಾವಿಬ್ಬರೇ  ಹೇಗೆ  ತಾನೆ  ಈ  ಕೆಡುಕಿನ  ಹಾಗೂ  ಹಿಂಸೆಯ  ಆಚರಣೆಯನ್ನು  ನಿಲ್ಲಿಸುವುದಕ್ಕೆ  ಆಗುತ್ತದೆ ?  ನಿಲ್ಲಿಸಲು  ಪ್ರಯತ್ನಿಸಿದಾಗ  ನಮ್ಮ  ಮೇಲೆ  ಪೂಜಾರಿಯ  ಕಡೆಯವರಿಂದ  ಹಲ್ಲೆಯಾದರೆ  ಏನು  ಗತಿ ?  ಇಂತಹ  ಅಂಜಿಕೆಗೆ  ಒಳಗಾದ  ನಾನು ,  ಈ  ಸಾಮಾಜಿಕ  ಕೇಡಿನ  ಎದುರಾಗಿ  ಸೆಣೆಸಲು  ಹಿಂಜರಿದು “ ಊರಿಗಿಲ್ಲದ  ಉಸಾಬರಿ  ನನಗ್ಯಾಕೆ “  ಎಂದು  ನನ್ನ  ದುಗುಡವನ್ನು  ಗೆಳೆಯನಿಗೆ  ತಿಳಿಸಿ , ಅತ್ತ  ಹೋಗುವುದನ್ನು  ನಿಲ್ಲಿಸಿದೆ .
ಆದರೆ  ನನ್ನ  ಗೆಳೆಯ  ಇನ್ನೂ  ಹರೆಯದವರು . ಅವರು  ಈ  ಕೆಡುಕಿನ  ಆಚರಣೆಯ  ಎದುರಾಗಿ  ಹೋರಾಡಿ  , ಪೂಜಾರಿಯ  ವಂಚನೆ  ಹಾಗೂ  ಕಾಮವಿಕಾರತೆಯನ್ನು  ಬಯಲಿಗೆಳೆದು , ಹಳ್ಳಿಯ  ಹೆಣ್ಣು ಮಕ್ಕಳು  ಪಡುತ್ತಿದ್ದ  ನರಕ ಯಾತನೆಯನ್ನು  ನಿವಾರಿಸುವ  ಗಟ್ಟಿಯಾದ  ನಿಲುವನ್ನು  ಹೊಂದಿದ್ದರು . ಮುಂದಿನ  ವಾರಗಳಲ್ಲಿಯೂ  ತಪ್ಪದೇ  ದೇಗುಲಕ್ಕೆ  ಹೋಗಿಬರತೊಡಗಿದರು . ಪೂಜಾರಿಯ  ನಂಬಿಕೆಗೆ  ಪಾತ್ರವಾಗುವಂತೆ  ನಡೆದುಕೊಂಡರು . ಪೂಜಾರಿಗೆ  ಇವರ  ಬಗ್ಗೆ  ಸಂಪೂರ್ಣವಾಗಿ  ವಿಶ್ವಾಸ  ಮೂಡುತ್ತಿದ್ದಂತೆಯೇ , ಒಂದು  ದಿನ  ತಮ್ಮೊಡನೆ  ಪೋಟೊ  ತೆಗೆಯುವವರನ್ನು  ಕರೆದುಕೊಂಡು ಹೋದರು . ಪೂಜಾರಿಗೆ  ಇಬ್ಬರು  ದಿಂಡುರುಳಿದರು . ನಂತರ –
“ ನೋಡಿ  ಸ್ವಾಮಿ , ನಿಮ್ಮ  ದೇವತೆಯ  ಮಹಿಮೆಯನ್ನು  ನನ್ನಿಂದ  ತಿಳಿದುಕೊಂಡು      ಇವರು  ಬಂದಿದ್ದಾರೆ . ಇವರು  ನಗರದಲ್ಲಿ  ಒಂದು  ದೊಡ್ಡ  ಪೋಟೊ  ಸ್ಟುಡಿಯೋ  ಇಟ್ಟಿದ್ದಾರೆ . ತಮ್ಮ  ಸ್ಟುಡಿಯೋನಲ್ಲಿ   ದೇವತೆಯ  ಹಾಗೂ  ನಿಮ್ಮ  ಚಿತ್ರವನ್ನು  ದೊಡ್ಡದಾಗಿ  ಇಟ್ಟು , ತಮ್ಮ  ಗಿರಾಕಿಗಳಿಗೆಲ್ಲಾ  ನಿಮ್ಮ  ಪೂಜೆಯ ಮಹಿಮೆಯನ್ನು  ತಿಳಿಸಿ , ಹೆಚ್ಚಿನ  ಪ್ರಚಾರ ಮಾಡಬೇಕೆಂದಿದ್ದಾರೆ . ಆದ್ದರಿಂದ  ಇಲ್ಲಿ  ಪೋಟೊ  ತೆಗೆಯಲು  ಅವಕಾಶವನ್ನು  ಕೊಡಿ “ ಎಂದು  ನನ್ನ  ಗೆಳೆಯ  ಕೇಳಿಕೊಂಡರು .  ಇದರಿಂದ  ಹಿಗ್ಗಿ ಹಿರೇಕಾಯಿಯಾದ  ಪೂಜಾರಿಯು  ಅಂದು  ಇನ್ನೂ  ಜೋರಾಗಿಯೇ  ತನ್ನೆಲ್ಲಾ  ಆಚರಣೆಗಳನ್ನು  ಮಾಡಿದ . ಅವೆಲ್ಲವನ್ನೂ  ಕ್ಯಾಮರದಲ್ಲಿ  ಸೆರೆಹಿಡಿಯಲಾಯಿತು .
ಪೋಟೊಗಳು  ಕಯ್ಗೆ  ಬಂದ  ಕೂಡಲೇ , ನನ್ನ  ಗೆಳೆಯರು  ದೇಗುಲದಲ್ಲಿ  ನಡೆಯುತ್ತಿದ್ದ  ಎಲ್ಲಾ  ಬಗೆಯ ಅನಾಚಾರಗಳನ್ನು  ಚಿತ್ರ ಸಹಿತ  ವಿವರಸಿ , ನಾಡಿನ  ಅನೇಕ  ಪತ್ರಿಕೆಗಳಲ್ಲಿ  ಬರಹಗಳನ್ನು  ಬರೆದು , ಸಾರ್ವಜನಿಕರ  ಗಮನಕ್ಕೆ  ತಂದರು . ಪತ್ರಿಕೆಗಳಲ್ಲಿ  ಬರಹಗಳು  ಪ್ರಕಟಗೊಳ್ಳುತ್ತಿದ್ದಂತೆಯೇ  ,  ಆ  ಊರಿನ  ಜನರಲ್ಲಿ  ಹಲವರು   ಎಚ್ಚರಗೊಂಡು , ತಮ್ಮ  ಊರಿನಲ್ಲಿ  ನಡೆಯುತ್ತಿದ್ದ  ಇಂತಹ  ಸಾಮಾಜಿಕ  ಕೆಡುಕಿನ  ಎದುರಾಗಿ  ಹೋರಾಡಿ , ಹಿಂಸೆಯ  ಆಚರಣೆಯನ್ನು  ನಿಲ್ಲಿಸುವುದು  ತಮ್ಮ  ಕರ್ತವ್ಯವೆಂಬುದನ್ನು  ಅರಿತುಕೊಂಡು , ದೇಗುಲದ  ಮುಂದೆ  ಪೂಜಾದಿನಗಳಂದು  ಹಿಂಸೆಯ  ಆಚರಣೆಯು  ಪೂಜಾರಿಯಿಂದ  ನಡೆಯದಂತೆ  ನೋಡಿಕೊಳ್ಳತೊಡಗಿದರು  . ಪೋಲಿಸಿನವರು  ಇತ್ತ  ಗಮನ ಹರಿಸಿ ,  ಹೆಣ್ಣು ಮಕ್ಕಳನ್ನು  ಹಿಂಸಿಸುವ  ಆಚರಣೆಯ  ಬಗ್ಗೆ  ಕಾನೂನಿನ  ಕ್ರಮವನ್ನು  ತೆಗೆದುಕೊಂಡು , ಕೋರ್ಟಿನಲ್ಲಿ  ಮೊಕದ್ದಮೆಯನ್ನು  ಹೂಡುವುದಾಗಿ    ಪೂಜಾರಿಗೆ  ಎಚ್ಚರಿಕೆಯನ್ನು  ನೀಡಿದರು .  ಪ್ರತಿ  ಮಂಗಳವಾರ  ಮತ್ತು  ಶುಕ್ರವಾರಗಳಂದು  ಪೂಜಾ  ಸಮಯದಲ್ಲಿ  ಪೋಲಿಸ್  ಕಾವಲನ್ನು  ಹಾಕಿ , ಪೂಜಾರಿಯ  ಕ್ರಿಯೆಗಳನ್ನು  ಗಮನಿಸತೊಡಗಿದರು .
ಕಾನೂನಿನ  ಹೆದರಿಕೆ  ಮತ್ತು  ಊರಿನ  ಎಚ್ಚರಗೊಂಡ  ಜನರ   ಸಾಮಾಜಿಕ  ಹೊಣೆಗಾರಿಕೆಯ  ನಡೆನುಡಿಗಳಿಂದಾಗಿ    ಪೂಜಾರಿಯು  ತನ್ನ  ಕಾಮವಿಕಾರದ  ಮತ್ತು  ಹಿಂಸೆಯಿಂದ  ಕೂಡಿದ್ದ   ಆಚರಣೆಯನ್ನು  ಕೂಡಲೇ  ಕಯ್ ಬಿಟ್ಟ . ಊರಿನ  ಹಿರಿಯರು  ನ್ಯಾಯಪಂಚಾಯ್ತಿ  ಮಾಡಿ , ಇಂತಹ  ಕೊಳಕನನ್ನು  ದೇಗುಲದಿಂದ  ಹೊರದಬ್ಬಿ , ಮತ್ತೊಬ್ಬನನ್ನು  ನೇಮಿಸಿ , ಒಳ್ಳೆಯ  ರೀತಿಯಲ್ಲಿ  ಪೂಜಾಕಾರ್ಯಗಳು  ನಡೆದುಕೊಂಡು  ಹೋಗುವಂತೆ  ಮಾಡಿದರು .